[1]ಮಂಗಳೂರು : ಉರ್ವ ಹೊಗೆಬೈಲಿನ ಸೌಜನ್ಯ ಮಹಿಳಾ ಮಂಡಲದ ಆಶ್ರಯದಲ್ಲಿ ಮಹಿಳೆಯರಿಗಾಗಿ ಮಾರ್ಚ್ 20 ರಂದು ವಿವಿಧ ರೀತಿಯ ರಂಗೋಲಿ ಕಲೆಯ ಪ್ರಾತ್ಯಕ್ಷಿಕೆ ನಡೆಯಿತು.
ರಂಗೋಲಿ ಕಲೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತ ಕಲಾವಿದೆ ಶ್ರೀಮತಿ ಚಂದ್ರಕಲಾ ಜಯರಾಮ ಆಚಾರ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಚುಕ್ಕಿ ರಂಗೋಲಿ, ಎಳೆರಂಗೋಲಿ, ರೇಖಾ ರಂಗೋಲಿಗಳನ್ನು ಹಾಕುವ ಹಾಗೂ ಬಣ್ಣ ತುಂಬುವ ಬಗ್ಗೆ ಎಳೆ ಎಳೆಯಾಗಿ ವಿವರಿಸಿ ಮಾಹಿತಿ ನೀಡಿದರು.
ಆರಂಭದಲ್ಲಿ ಮಂಡಳಿಯ ಗೌರವಾಧ್ಯಕ್ಷೆ ಕೆ.ಎ ರೋಹಿಣಿ ಸ್ವಾಗತಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ರತ್ನಾವತಿ ಜೆ. ಬೈಕಾಡಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು, ಅಧ್ಯಕ್ಷೆ ಶಾಂತಾ ಎಲ್.ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ರಾಜೇಶ್ವರಿ ಎಸ್. ರಾವ್ ವಂದಿಸಿದರು. ಶೈಲಜಾ ಎ. ರಾವ್ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಚಂದ್ರಿಕಾ ಜಯರಾಮ್ ಅವರನ್ನು ಅವರು ರಂಗೋಲಿ ಕಲೆಯಲ್ಲಿ ಗೈದ ಸಾಧನೆಗಾಗಿ ಅಭಿನಂದಿಸಲಾಯಿತು. ಅಭಿನಂದನೆಗೆ ಉತ್ತರಿಸುತ್ತಾ ಮಹಿಳೆಯರನ್ನುದ್ದೇಶಿಸಿ ಮಾತನಾಡಿದ ಅವರು ರಂಗೋಲಿ ಕಲೆ ಮುಖ್ಯವಾಗಿ ಮಹಿಳೆಯರಿಗೆ ಸಂಬಂಧಿಸಿದ್ದು ಅದನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಅವರ ಮೇಲಿದೆ, ಪ್ರತಿಯೊಬ್ಬರೂ ದಿನಾ ತಮ್ಮ ಮನೆಯ ಮುಂದೆ ತಾವು ರಂಗೋಲಿ ಹಾಕುವುದಲ್ಲದೆ ಮಕ್ಕಳಿಗೂ ತರಬೇತಿ ನೀಡಿ ರಂಗೋಲಿ ಹಾಕಿಸಬೇಕು ಎಂದರು.