ಮಂಗಳೂರು : ನಗರದ ಎಂಆರ್ಪಿಎಲ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗುತ್ತಿಗೆ ಕಾರ್ಮಿಕ ಒಬ್ಬನ ಮೇಲೆ ಪೈಪ್ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಉತ್ತರಪ್ರದೇಶದ ಕುಶಿನಗರ ಮೂಲದ ಹಾಗೂ ಪ್ರಸ್ತುತ ಜೋಕಟ್ಟೆ ನಿವಾಸಿಯಾದ ವಕೀಲ್ಕುಮಾರ್ (37) ಮೃತ ಕಾರ್ಮಿಕ. ಕುತ್ತೆತ್ತೂರು ಎಂಆರ್ಪಿಎಲ್ನಲ್ಲಿ ‘ಆಕಾಶ್ ಇಂಜಿನಿಯರಿಂಗ್’ ಎಂಬ ಗುತ್ತಿಗೆ ಕಂಪನಿಯಲ್ಲಿ ಶೆಡೌನ್ ಕೆಲಸಕ್ಕೆ ನಿರ್ವಹಿಸುತ್ತಿದ್ದ ವಕೀಲ್ ಕುಮಾರ್ ಶನಿವಾರ 12:30ಕ್ಕೆ ಪಿಪಿಪಿಎಫ್ಸಿಸಿ ಯೂನಿಟ್ನಲ್ಲಿ ಕೆಲಸ ನಿರ್ವಹಿಸುವ ವೇಳೆ ಪೈಪ್ವೊಂದು ತುಂಡಾಗಿ ಅವರ ತಲೆಯ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸುರತ್ಕಲ್ನ ಕಾನದ ಖಾಸಗಿ ಶವಾಗಾರದಲ್ಲಿ ಇರಿಸಲಾಗಿದೆ.
ಸೋಮವಾರ ನಸುಕಿನಜಾವ 4 ಗಂಟೆಗೆ ವಿಮಾನದಲ್ಲಿ ಬೆಂಗಳೂರು ಮೂಲಕ ಮೃತರ ಮನೆಗೆ (ಉತ್ತರಪ್ರದೇಶ) ಕೊಂಡೊಯ್ಯಲಾಗುತ್ತದೆ ಎಂದು ತಿಳಿದು ಬಂದಿದೆ.ಮೃತ ವಕೀಲ್ ಕುಮಾರ್ಗೆ ತಂದೆ, ತಾಯಿ, ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಕುಟುಂಬದವರೆಲ್ಲ ಉತ್ತರಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ವಾಸವಾಗಿದ್ದಾರೆ. ಮೃತರು ಕುಟುಂಬ ನಿರ್ವಹಣೆಗಾಗಿ ಮಂಗಳೂರಿಗೆ ಕಳೆದ ತಿಂಗಳು ಆಗಮಿಸಿ ಎಂಆರ್ಪಿಎಲ್ನಲ್ಲಿ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದರು. ಕುಟುಂಬಕ್ಕೆ ಇವರೇ ಆಧಾರಸ್ತಂಭವಾಗಿದ್ದರು. ಮೃತರ ಕುಟುಂಬಕ್ಕೆ ಆಕಾಶ್ ಇಂಜಿನಿಯರಿಂಗ್ ಕಂಪನಿಯ10 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದೆ. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English