[1]ಮಂಗಳೂರು : ಪುತ್ತೂರು ಕಾಲೇಜಿನ ವಿದ್ಯಾರ್ಥಿಗಳು ತಮ್ಮದೇ ಕಾಲೇಜಿನ ಸಹಪಾಠಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಐವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಪುತ್ತೂರು ತಾಲ್ಲೂಕಿನ ಬಜತ್ತೂರು ಗ್ರಾಮದ ಗಾಣದ ಮೂಲೆ ಮನೆ ನಿವಾಸಿ ಗುರುನಂದನ್ ಅಲಿಯಾಸ್ ರಾಧಾಕಷ್ಣ, ಅರ್ಯಾಪು ಗ್ರಾಮದ ಪಿಲಿಗುಂಡ ಮನೆ ನಿವಾಸಿ ಸುನಿಲ್ ಅಲಿಯಾಸ್ ಕಾಂತಪ್ಪ ಗೌಡ, ಬಂಟ್ವಾಳ ತಾಲ್ಲೂಕಿನ ಪೆರ್ನೆ ನಿವಾಸಿಗಳಾದ ಪ್ರಜ್ವಲ್ ಅಲಿಯಾಸ್ ನಾಗೇಶ್ ನಾಯ್ಕ್ ಮತ್ತು ಕಿಶನ್ ಅಲಿಯಾಸ್ ಸದಾಶಿವ, ಬರಿಮಾರು ಗ್ರಾಮದ ಬಲ್ಯ ಮನೆ ನಿವಾಸಿ ಪ್ರಖ್ಯಾತ್ ಅಲಿಯಾಸ್ ಸುಬ್ಬಣ್ಣ ಶೆಟ್ಟಿ ಎಂದು ಗುರುತಿಸಲಾಗಿದೆ.
ಈ ಯುವಕರು ಗಾಂಜಾ ಮತ್ತಿನಲ್ಲಿ ತಮ್ಮದೆ ಕಾಲೇಜಿನ ಸಹಪಾಠಿ ವಿದ್ಯಾರ್ಥಿನಿಯನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ, ಆಕೆಗೆ ಮತ್ತು ಬರುವಂತೆ ಮಾಡಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು, ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು ಎಂದು ನಂಬಲಾಗಿದೆ .
ಈಗ ಆರೋಪಿಗಳನ್ನು ಬಂಧಿಸಿರುವ ದಕ್ಷಿಣ ಕನ್ನಡ ಪೊಲೀಸರು, ಅತ್ಯಾಚಾರದ ವಿಡಿಯೋ ಪ್ರಸಾರ ಮಾಡುವವರ ಮೇಲೆಯೂ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.