[1]ಉಡುಪಿ : ಗುರುವಾರ ತಡ ರಾತ್ರಿ ಸಿದ್ದಾಪುರ ಸಮೀಪದ ಯಡಮೊಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮ್ಟಿಬೇರು ಎಂಬಲ್ಲಿ ಅಪಹರಣಕ್ಕೊಳಗಾಗಿದ್ದ ಹೆಣ್ಣು ಮಗುವಿನ ಮೃತ ದೇಹ ಕುಬ್ಜಾ ನದಿಯಲ್ಲಿ ಪತ್ತೆಯಾಗಿದೆ.
ಕುಮ್ಟಿಬೇರು ನಿವಾಸಿ ಸಂತೋಷ್ ನಾಯ್ಕ್ – ರೇಖಾ ದಂಪತಿಯ ಒಂದು ವರ್ಷದ ಮಗಳು ಸಾನ್ವಿಕಾ ಮೃತ ದುರ್ದೈವಿ.
ನಿನ್ನೆ ತಾಯಿಯೊಂದಿಗೆ ಮಲಗಿದ್ದ ಸಾನ್ವಿಕಾಳನ್ನು ಮುಸುಕುಧಾರಿಯೊಬ್ಬ ಅಪಹರಿಸಿದ್ದಾನೆ ಎಂದು ದೂರು ದಾಖಲಾಗಿತ್ತು. ಶುಕ್ರವಾರ ಮನೆಯ ಹತ್ತಿರದಲ್ಲೇ ಇರುವ ಕುಬ್ಜಾ ನದಿಯಲ್ಲಿ ಮಗುವಿನ ಶವಪತ್ತೆಯಾಗಿದೆ. ಪೊಲೀಸರು ಮಗುವಿನ ಸಾವಿಗೆ ನಿಖರ ಕಾರಣ ಹುಡುಕುತ್ತಿದ್ದಾರೆ. ಒಂದು ಮಾಹಿತಿ ಪ್ರಕಾರ ಮಗುವಿನ ತಾಯಿಯೇ ಇಬ್ಬರು ಮಕ್ಕಳು ಜೊತೆ ನದಿಗೆ ಹಾರಿದ್ದಾಳೆ ಎಂದು ಹೇಳಲಾಗುತ್ತಿದ್ದು, ಪೊಲೀಸರು ಈ ಕುರಿತಂತೆ ತನಿಖೆ ನಡೆಸುತ್ತಿದ್ದಾರೆ.
ನಿನ್ನೆ ಮುಂಜಾನೆ 4 ರಿಂದ 5 ಗಂಟೆ ಸಮಯದಲ್ಲಿ ಮುಸುಕುದಾರಿಯೊಬ್ಬ ತಾಯಿ ರೇಖಾ ಜೊತೆ ಮಲಗಿದ್ದ ಸಾನ್ವಿಕಾಳನ್ನು ಅಪಹರಿಸಿದ್ದು, ಮಗುವಿನ ಅಳು ಕೇಳಿ ಮಗುವಿನ ತಾಯಿ ರೇಖಾ ತನ್ನ ಇನ್ನೊಂದು ಮಗುವಿನ ಜೊತೆ ಅಪರಹಣಕಾರನನ್ನು ಬೆನ್ನತ್ತಿದ್ದಾರೆ ಎಂದು ಹೇಳಲಾಗಿತ್ತು. ನಂತರ ಅಪಹರಣಕಾರ ಮನೆಯ ಸಮೀಪದಲ್ಲಿ ಇದ್ದ ಕುಬ್ಜಾ ನದಿಯಲ್ಲಿ ಇಳಿದು ಪರಾರಿಯಾಗಿದ್ದು, ಈ ಸಂದರ್ಭದಲ್ಲಿ ಮಗುವ ರಕ್ಷಿಸಲು ನದಿಗೆ ಇಳಿದ ರೇಖಾ ಇನ್ನೊಂದು ಮಗುವಿನ ಜೊತೆ ನದಿಯಲ್ಲಿ ಕೊಚ್ಚಿಹೋಗುವ ಸಂದರ್ಭ ಸ್ಥಳೀಯರು ಬಂದು ಇಬ್ಬರನ್ನು ರಕ್ಷಿಸಿದ್ದಾರೆ ಎಂದು ಹೇಳಲಾಗಿತ್ತು.
[2]ಅಪಹರಣಕಾರ ಮಗು ಸಾನ್ವಿಕಾಳನ್ನು ನದಿ ದಾಟಿ ಹೊತ್ತೊಯ್ದಿದ್ದು ಆತನ ಜೊತೆ ಇನ್ನೊಬ್ಬ ಅಪಹರಣಕಾರ ಇದ್ದ ಎಂದು ರೇಖಾ ಪೊಲೀಸರಿಗೆ ತಿಳಿಸಿದ್ದರು.
ಅಪಹರಣದ ದೂರು ದಾಖಲಾಗುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಸ್ಥಳಕ್ಕೆ ಭೇಟಿ ನೀಡಿದ್ದರು. ಅಲ್ಲದೆ ಮಗುವಿನ ಪತ್ತೆಗಾಗಿ ಕುಂದಾಪುರ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು.