- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪ್ರಪಾತಕ್ಕೆ ಬಿದ್ದು ಬೆಳ್ತಂಗಡಿ ನಿವಾಸಿ ಅಮೆರಿಕಾದಲ್ಲಿ ಸಾವು

Beltangady [1]ಬೆಳ್ತಂಗಡಿ : ತಾಲೂಕಿನ ನಿಟ್ಟಡೆ ಗ್ರಾಮದ ಫಂಡಿಜೆ ಮೂಲದ ಪ್ರಸ್ತುತ ಅಮೆರಿಕಾದಲ್ಲಿ ವಾಸ್ತವ್ಯವಿದ್ದ ಚೈತನ್ಯ ಸಾಠೆ (36) ಆ. 24 ರಂದು ಪರ್ವತಾ ಅವರೋಹಣ ಸಂದರ್ಭ ಪ್ರಪಾತಕ್ಕೆ ಬಿದ್ದು ದುರ್ಮರಣವನ್ನಪ್ಪಿದ ಘಟನೆ ನಡೆದಿದೆ.

ಅಮೆರಿಕಾದ ಮೌಂಟ್ ಹುಡ್ ಲೋವರ್‌ ಜಾರ್ಜ್‌ನ ಟೆರ್ರಾಬಾನ್ ವ್ಯಾಪ್ತಿಯ ಸ್ಮಿತ್ ರಾಕ್‌ಸ್ಟೇಟ್ ಪಾರ್ಕ ಎಂಬಲ್ಲಿ 100 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಇವರು ಪೋರ್ಟ್‌ಲ್ಯಾಂಡ್ ಮೂಲದ ಮಾಝಾಮಾಸ್‌ ಎಂಬ ಪರ್ವತಾರೋಹಿ ಸಂಘಟನೆಯಲ್ಲಿದ್ದು ಅನೇಕ ಚಾರಣಗಳಲ್ಲಿ ಪಾಲ್ಗೊಂಡಿದ್ದ ಇವರು ಸ್ಮಿತ್‌ರಾಕ್ ಗಿರಿಶಿಖರವನ್ನು ಇಳಿಯುತ್ತಿರುವ ಸಂದರ್ಭ ಸುಮಾರು ಬೆಳಿಗ್ಗೆ 9.40ರ ಸಂದರ್ಭ ಜಾರಿ ಬಿದ್ದಿದ್ದಾರೆ.

ಚೈತನ್ಯ ಇವರು ಮೂಲತಃ ಫಂಡಿಜೆಸಾಠೆ ಮನೆಯ, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ಹಿರಿಯ ವಿಜ್ಞಾನಿ ರಮೇಶ್ ಸಾಠೆಯವರ ಪುತ್ರ. ಇವರು ಕೂಡ ವಿಜ್ಞಾನ ಮತ್ತು ಆಧ್ಯಾತ್ಮದ ಸಂಶೋಧಕರಾಗಿದ್ದರು. ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆದು ಅವರು ಅಮೆರಿಕಾದ ಚಂಪಗಾನೆ ಅರ್ಬನಾ ನಗರದ ಈಲ್ಲಿನೋಇಸ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ಕೆಲಸ ಮಾಡುತ್ತಿದ್ದರು. ಅವರು 11 ಸಂಶೋಧನಾ ಕೆಲಸಗಳನ್ನು ಮಾಡಿದ್ದಾರಲ್ಲದೆ 306 ಪ್ರಬಂಧಗಳನ್ನು,401 ಸಂಶೋಧನಗೆ ಸಂಬಂಧಪಟ್ಟ ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಅಮೆರಿಕಾದ ಹಿಲ್ಸ್‌ಬೊರೊ ಎಂಬಲ್ಲಿ ಕಳೆದ ಏಳು ವರ್ಷಗಳಿಂದ ವಾಸವಾಗಿದ್ದರು. ಇವರ ನಿಧನದಿಂದ ಭಾರತವು ಉದಯೋನ್ಮುಖ ವಿಜ್ಞಾನಿಯನ್ನು ಕಳೆದುಕೊಂಡಂತಾಗಿದೆ. ಮೃತರು ತಂದೆ, ತಾಯಿ, ಸಹೋದರಿಯನ್ನುಅಗಲಿದ್ದಾರೆ.