ಮಂಗಳೂರು : ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ದೈವಗಳ ನೇಮೋತ್ಸವ ಸುಮಾರು 70 ವರ್ಷಗಳಿಂದ ನಿಂತು ಹೋಗಿತ್ತು. ಈ ಬಾರಿ ಬ್ರಹ್ಮಕಲಶೋತ್ಸದ ನಂತರ ಜಾತ್ರೋತ್ಸವದ ಕೊನೆ ದಿನ ಉಳ್ಳಾಕ್ಲು ಮಗ್ರಂತಾಯಿ ದೈವದ ನೇಮೋತ್ಸವ ನಡೆದಿದೆ. ಆ ನೇಮೋತ್ಸವದಲ್ಲಿ ಮೊದಲ ಬಾರಿಗೆ ಪಾಲ್ಗೊಂಡ ಹದಿನಾರು ವರ್ಷದ ಬಸವ ಶಂಕರ ಮೃತಪಟ್ಟಿದೆ.
ಕಾಂಕ್ರಿಜ್ ತಳಿಯ ಬಹು ಕಟ್ಟುಮಸ್ತಾಗಿದ್ದ ಬಸವ ಶಂಕರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ ತಿಂಗಳಲ್ಲಿ ನಡೆದ ಬ್ರಹ್ಮಕಲಶೋತ್ಸದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಯಾತ್ರಾರ್ಥಿಗಳ ಆಕರ್ಷಣೆಯಾಗಿತ್ತು, ಭಕ್ತರು ಭಕ್ತಿಯಿಂದ ಕೈ ಮುಗಿದು ಶಂಕರನ ಆಶೀರ್ವಾದ ಪಡೆಯುತ್ತಿದ್ದರು.
ಕಳೆದ ಹತ್ತು ವರ್ಷಗಳಲ್ಲಿ ಶ್ರೀ ಕ್ಷೇತ್ರ ಅರ್ಕುಳದಲ್ಲಿ ಮೂರು ಬಾರಿ ನಡೆಯುತ್ತಿದ್ದ ನೇಮ ಉತ್ಸವಗಳಲ್ಲಿ ಹಾಗೂ ಕ್ಷೇತ್ರದಲ್ಲಿ ನಡೆಯುತ್ತಿದ್ದ ಎಲ್ಲಾ ಪರ್ವಗಳಲ್ಲಿಯೂ ಭಾಗವಹಿಸಿ, ಭಕ್ತ ಜನರ ಆಕರ್ಷಣೆಯಾಗಿದ್ದ ಶಂಕರನಿಗೆ ನೇಮೋತ್ಸವದ ಸಂದರ್ಭದಲ್ಲಿ ಕೆಲಹೊತ್ತು ದರ್ಶವೂ ಬರುತಿತ್ತು.
ಅರ್ಕುಳ ಶ್ರೀ ಉಳ್ಳಾಕ್ಲು ಮಗ್ರಂತಾಯಿ ಕ್ಷೇತ್ರದ ಬಸವ ಶಂಕರನಿಗೆ (16 ವರ್ಷ) ವಯಸ್ಸಾಗಿತ್ತು. ಇತ್ತೀಚೆಗೆ ಅಲ್ಪಕಾಲದ ಅಸೌಖ್ಯ ಕಾಣಿಸಿಕೊಂಡು ಭಾನುವಾರ ಇಹಲೋಕ ತ್ಯಜಿಸಿತು.
ಜನರ ಶ್ರದ್ಧೆ, ಭಕ್ತಿಗಳ ಪ್ರತೀಕವಾಗಿ ಪೂಜೆಗೊಳ್ಳುತ್ತಿದ್ದ ಸಾಧು ಸ್ವಭಾವದ ಶಂಕರನಿಗೆ ಭಕ್ತರು ಅಂತಿಮ ನಮನ ಸಲ್ಲಿಸಿದರು. ಆತನನ್ನು ಹಿಂದೂ ಸಂಪ್ರದಾಯದಂತೆ ಅರ್ಕುಳದಲ್ಲಿ ಸಮಾಧಿಮಾಡಲಾಯಿತು.
Click this button or press Ctrl+G to toggle between Kannada and English