ಉಡುಪಿ : ಎರಡು ದಿನಗಳ ಹಿಂದಷ್ಟೇ ವರ್ಗಾವಣೆಗೊಂಡಿರುವ ಕುಂದಾಪುರ ಉಪವಿಭಾಗಾಧಿಕಾರಿ ಡಾ.ಎಸ್.ಎಸ್.ಮಧುಕೇಶ್ವರ್ ಅವರ ಸರ್ಕಾರಿ ವಸತಿಗೃಹದ ಮೇಲೆ ಎಸಿಬಿ ದಾಳಿ ನಡೆಸಿದೆ.
ಹಿರಿಯ ಕೆಎಎಸ್ ಶ್ರೇಣಿಯ ಅಧಿಕಾರಿಯಾಗಿ ಕೆಲವು ತಿಂಗಳ ಹಿಂದಷ್ಟೇ ಕುಂದಾಪುರದ ಎಸಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಡಾ. ಮಧುಕೇಶ್ವರ ಕುಂದಾಪುರ ಅಸಿಸ್ಟೆಂಟ್ ಕಮಿಷನರ್ ಆಗಿ ಪ್ರತಿಯೊಂದು ಕಡತ ವಿಲೇವಾರಿಗೂ ಲಂಚಕ್ಕಾಗಿ ಕೈಚಾಚುತ್ತಿದ್ದರು ಅನ್ನುವುದು ಸಾರ್ವಜನಿಕರ ಆರೋಪವಾಗಿತ್ತು.
ಅವರ ಮೇಲೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಾ. ಮಧುಕೇಶ್ವರ ಮಂಗಳವಾರವಷ್ಟೇ ಕುಂದಾಪುರ ಉಪವಿಭಾಗದಿಂದ ವರ್ಗಾವಣೆಗೊಂಡಿದ್ದರು. ಆದರೆ ಯಾವ ಸ್ಥಳವೂ ನಿಗದಿಯಾಗಿರಲಿಲ್ಲ. ಹೊಸದಾಗಿ ಬಂದಿರುವ ಉಪವಿಭಾಗಾಧಿಕಾರಿ ರಾಜು ಕೆ ಅವರಿಗೆ ನಿರ್ಗಮನ ಅಧಿಕಾರಿಯಾಗಿ ಮಧುಕೇಶ್ವರ್ ಮನೆ ಬಿಟ್ಟುಕೊಡಬೇಕಿತ್ತು. ಆದರೆ ಅದೇ ಮನೆಯೊಳಗೆ ಲಂಚ ಪಡೆದು ಕಡತಗಳನ್ನು ವಿಲೇವಾರಿ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಉಡುಪಿ ಎಸಿಬಿ ಡಿವೈಎಸ್ ಪಿ ಮಂಜುನಾಥ ನೇತೃತ್ವದಲ್ಲಿ ಇಂದು ದಾಳಿ ನಡೆದಿದೆ.
Click this button or press Ctrl+G to toggle between Kannada and English