ಪುತ್ತೂರು : ವಿಶ್ವ ಹಿಂದೂ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಡೀಕಯ್ಯ ಪೆರ್ವೋಡಿ(60) ಇಂದು ಬೆಳಗ್ಗೆ ನಿಧನರಾದರು.
ಅವರು ಪತ್ನಿ ಆಶಾ ಹಾಗೂ ಪುತ್ರ ಶಿಶಿರ್ ಪೆರ್ವೋಡಿಯವರನ್ನು ಅಗಲಿದ್ದಾರೆ. ಅವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳ ಜವಾಬ್ದಾರಿಯಿಂದ ವಿಮುಖರಾಗಿದ್ದರು. ಪ್ರಗತಿಪರ ಕೃಷಿಕರೂ ಆಗಿದ್ದ ಡೀಕಯ್ಯ ಪೆರ್ವೋಡಿ ಪಡ್ನೂರು ಗ್ರಾಮದ ಪೆರ್ವೊಡಿಯ ನಿವಾಸಿ. ಎಳವೆಯಲ್ಲಿ ಆರ್ಎಸ್ಎಸ್ ಪ್ರಭಾವಕ್ಕೆ ಒಳಗಾದ ಅವರು ತಮ್ಮ ಸಮಾಜಮುಖಿ ಚಿಂತನೆಗಳಿಗೆ ಅದರ ಮೂಲಕವೇ ಮೂರ್ತ ರೂಪ ನೀಡಿದವರು.
ದಶಕಗಳ ಕಾಲ ಹಿಂದೂ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಡೀಕಯ್ಯ ಪೆರ್ವೋಡಿ, ವಿಶ್ವ ಹಿಂದೂ ಪರಿಷತ್ನ ಜಿಲ್ಲಾ ಅಧ್ಯಕ್ಷರಾಗಿದ್ದರು. ಹಲವು ವರ್ಷಗಳ ಕಾಲ ಸಂಘಟನೆ ಬೆಳೆಸಲು ಶ್ರಮಿಸಿದ್ದರು. ಹೋರಾಟ ಸಂಘಟಿಸುವಲ್ಲಿ ಅವರು ಮುಂಚೂಣಿಯಲ್ಲಿರುತಿದ್ದರು. ದುರ್ಗಾವಾಹಿನಿ ಘಟಕಗಳನ್ನು ಪುತ್ತೂರು ಜಿಲ್ಲೆಯಾದ್ಯಂತ ವಿಸ್ತರಿಸುವಲ್ಲೂ ಕೆಲಸ ಮಾಡಿದ್ದರು. ವಿಶ್ವ ಹಿಂದೂ ಪರಿಷತ್ನ ಸುವರ್ಣ ಮಹೋತ್ಸವದ ಪ್ರಯುಕ್ತ 2016ರ ಜನವರಿಯಲ್ಲಿ ಪುತ್ತೂರಿನಲ್ಲಿ ನಡೆದ ಬೃಹತ್ ವಿರಾಟ್ ಹಿಂದೂ ಸಂಗಮದ ಯಶಸ್ಸಿಗಾಗಿ ಹಗಲಿರುಳು ದುಡಿದಿದ್ದರು. ಪಡ್ನೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.
Click this button or press Ctrl+G to toggle between Kannada and English