[1]ಚಿಕ್ಕಮಗಳೂರು : ಆಯುಧ ಪೂಜೆಯ ಹಿನ್ನೆಲೆ ಕೆರೆಯಲ್ಲಿ ತಮ್ಮ ಸೈಕಲ್ಗಳನ್ನು ತೊಳೆದು, ಬಳಿಕ ಈಜಲು ನೀರಿಗೆ ಇಳಿದಿದ್ದ ಮೂವರು ಬಾಲಕರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲಳ್ಳಿ ಗ್ರಾಮದಲ್ಲಿ ನಡೆದಿದೆ.
ಹೌಸಿಂಗ್ ಬೋರ್ಡ್ ನಿವಾಸಿಗಳಾದ ಮುರುಳಿ(15), ಜೀವಿತ್(14), ಚಿರಾಗ್(15) ಮೃತ ದುರ್ದೈವಿಗಳು. ಸೋಮವಾರ ಆಯುಧ ಪೂಜೆ ಇದ್ದ ಕಾರಣಕ್ಕೆ ಸಂಜೆ ತಮ್ಮ ಸೈಕಲ್ಗಳನ್ನು ತೊಳೆಯಲೆಂದು ಬಿಳೇಕಲ್ಲಳ್ಳಿ ಗ್ರಾಮದ ಕಂಚಿಕಟ್ಟೆ ಕೆರೆ ಬಳಿ ಮೂವರು ಬಾಲಕರು ತೆರೆಳಿದ್ದರು. ಹೀಗೆ ಕೆರೆಯಲ್ಲಿ ಸೈಕಲ್ ತೊಳೆದ ಬಳಿಕ ಈಜಲು ಬಾಲಕರು ನೀರಿಗೆ ಇಳಿದಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಈಜಲು ಕೆರೆಯಲ್ಲಿ ಇಳಿದಿದ್ದ ಮೂವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮುರುಳಿ, ಜೀವಿತ್ ಇಬ್ಬರ ಮೃತ ದೇಹಗಳು ಪತ್ತೆಯಾಗಿದ್ದು, ಚಿರಾಗ್ ಮೃತ ದೇಹಕ್ಕಾಗಿ ಸ್ಥಳದಲ್ಲಿ ಪೊಲೀಸ್ ಹಾಗೂ ಸ್ಥಳೀಯರಿಂದ ಶೋಧಕಾರ್ಯ ಮುಂದುವರಿದಿದೆ.
ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.