- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಾಂಗ್ರೆಸ್​ನಲ್ಲಿ ಗುಂಪುಗಾರಿಕೆ ಇಲ್ಲ : ಮಲ್ಲಿಕಾರ್ಜುನ ಖರ್ಗೆ

kharge [1]ಕಲಬುರಗಿ : ಕಾಂಗ್ರೆಸ್ ಸೇರಿದ ಮೇಲೆ ಎಲ್ಲರೂ ಕಾಂಗ್ರೆಸ್ಸಿಗರೆ ಹೊರತಾಗಿ ಮೂಲ, ವಲಸೆ ಕಾಂಗ್ರೆಸ್ಸಿಗರು ಅನ್ನೋ ಪ್ರಶ್ನೆಯೇ ಇಲ್ಲ. ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಇರಬಹುದು. ಆದರೆ, ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಇಲ್ಲ ಎಂದು ಎಐಸಿಸಿ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ದೊಡ್ಡ ಸಮುದ್ರ, ಇಲ್ಲಿ ಎಲ್ಲಾ ನದಿಗಳು ಬಂದು ಸೇರುತ್ತವೆ. ಹಾಗೆ ಪಕ್ಷಕ್ಕೆ ಬರುವವರು ಒಟ್ಟಾಗಿ ಇರ್ತಾರೆ. ಇಲ್ಲಿ ಗುಂಪುಗಾರಿಕೆಗೆ ಅವಕಾಶವಿಲ್ಲ. ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಇರುವುದು ಸಹಜ. ಇದನ್ನೇ ಮಾಧ್ಯಮದವರು ಮಸಾಲೆ ಹಚ್ಚಿ ವೈಭವೀಕರಿಸಿ ದಿಕ್ಕು ತಪ್ಪಿಸುವ ಕೆಲಸ ಮಾಡುವುದು ಸರಿಯಲ್ಲ ಎಂದು ಮಾಧ್ಯಮದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ವಿರೋಧ ಪಕ್ಷದ ನಾಯಕರನ್ನು ಸದ್ಯದಲ್ಲೇ ಆಯ್ಕೆ ಮಾಡಲಾಗುತ್ತದೆ. ವಿರೋಧ ಪಕ್ಷದ ನಾಯಕರ ಆಯ್ಕೆಯಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ಯಡಿಯೂರಪ್ಪಗೆ ಕೇಂದ್ರ ಸರ್ಕಾರದಿಂದ ಸಹಕಾರ ಸಿಗ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ತಾಳಮೇಳ ಇಲ್ಲ. ಸ್ಥಳೀಯಮಟ್ಟದ ಬಿಜೆಪಿಯಲ್ಲಿಯೂ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಮೋದಿಗೆ ಹೆದರಿ ಪಾರ್ಲಿಮೆಂಟ್ನಲ್ಲಿ ಅಥವಾ ಸರ್ಕಾರದಲ್ಲಿ ಧ್ವನಿ ಎತ್ತುವ ಕೆಲಸ ಯಾರೂ ಮಾಡ್ತಿಲ್ಲ. ಬಿಜೆಪಿ ಶಾಸಕರ ‌ಧ್ವನಿ ಎತ್ತಿದಕ್ಕೆ ಶೋಕಾಸ್ ನೋಟಿಸ್ ಕೊಡಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರದ ವಿರುದ್ಧ ಮಾತಾಡುವ ಧೈರ್ಯ ಯಾರೂ ತೋರಿಸುತ್ತಿಲ್ಲ ಎಂದರು.

49 ಪ್ರಗತಿಪರ ಚಿಂತಕರ ಮೇಲೆ ದೇಶದ್ರೋಹದ ಪ್ರಕರಣ ದಾಖಲು ಮಾಡಿರೋ ಸಂಬಂಧ ಪ್ರತಿಕ್ರಿಯಿಸಿದ ಖರ್ಗೆ, ನಂಬಿದಂತಹ ತತ್ವಗಳನ್ನು ಜನರ ಮುಂದೆ ಇಟ್ಟರೆ ಅವರು ದೇಶ ದ್ರೋಹೀನಾ? ಎಂದು ಪ್ರಶ್ನಿಸಿದರು. ತನ್ನ ಅಧಿಕಾರ ಉಳಿಸಿಕೊಳ್ಳಲು ಮೋದಿ ಎಲ್ಲರ ವಿರುದ್ಧ ಅಧಿಕಾರ ಚಲಾಯಿಸೋದು ತಪ್ಪು. ತನ್ನ ವಿರುದ್ಧ ಮಾತನಾಡಿದರೆ ದೇಶದ್ರೋಹಿ ಅನ್ನೋದು ಸರಿಯಲ್ಲ ಎಂದು ಮೋದಿ ವಿರುದ್ಧ ಹರಿಹಾಯ್ದರು. ಮೋಹನ ಭಾಗವತ್ ಒಬ್ಬರೇ ದೇಶಭಕ್ತರಾ..? ಸರ್ಕಾರ ಉಳಿಸಿಕೊಳ್ಳೋಕೆ ಈ ರೀತಿ ಮಾಡಲಾಗುತ್ತಿದೆ. ಮೋದಿ ವಿಚಾರಧಾರೆ ಮೇಲೆ ನಂಬಿಕೆಯಿಟ್ಟವರು ದೇಶಭಕ್ತರು, ಉಳಿದವರು ದೇಶದ್ರೋಹಿಗಳು ಅನ್ನೋ ಧೋರಣೆ ಸರಿಯಲ್ಲ ಎಂದು ಖರ್ಗೆ ಕಿಡಿಕಾರಿದರು.