[1]ಕಲಬುರಗಿ : ಚುನಾವಣೆ ಸಮಯದಲ್ಲಿ ಕಾರ್ಯಕರ್ತರ ಬಲ ಕುಗ್ಗಿಸುವ ದೃಷ್ಟಿಯಿಂದ ಐಟಿ ದಾಳಿ ಮಾಡಲಾಗುತ್ತಿದೆ ಎಂದು ಎಐಸಿಸಿಐ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕರ ಮನೆ ಮೇಲೆ ಐಟಿ ರೇಡ್ ವಿಚಾರವಾಗಿ ಮಾತನಾಡಿದ ಅವರು, ದ್ವೇಷದ ರಾಜಕೀಯ ನಿರಂತರವಾಗಿ ನಡೆಯುತ್ತಿದೆ. ಸ್ವಾಯತ್ತ ಸಂಸ್ಥೆಗಳ ಮೇಲಿನ ನಂಬಿಕೆ ಕಡಿಮೆಯಾಗುತ್ತಿದೆ. ಕೆಲವು ಪಕ್ಷ ಮತ್ತು ಕೆಲವರನ್ನು ಟಾರ್ಗೆಟ್ ಮಾಡಿ ಐಟಿ ರೈಡ್ ಮಾಡಲಾಗುತ್ತಿದೆ. ರಾಜಕೀಯ ಪ್ರೇರಿತ ದಾಳಿ ನಿಲ್ಲಿಸಬೇಕು. ತಪ್ಪು ಮಾಡಿದ್ದರೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಿ. ವಿರೋಧ ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ಮೇಲೆ ದುರುದ್ದೇಶದಿಂದ ದಾಳಿ ಮಾಡುವುದು ಸರಿಯಲ್ಲ ಎಂದರು.
ವಿರೋಧ ಪಕ್ಷದ ನಾಯಕ ಆಯ್ಕೆ ಪ್ರಕ್ರಿಯೆ ನಿರಂತರವಾದುದು. ಇದು ಹೈಕಮಾಂಡ್ ನಿರ್ಧಾರ. ಸಿಎಲ್ ಪಿ ನಾಯಕ ಇಲ್ಲಿ ವಿರೋಧ ಪಕ್ಷದ ನಾಯಕರಾಗುತ್ತಾರೆ. ಇದು ಉತ್ತಮ ಬೆಳವಣಿಗೆ ಎಂದು ವಿವರಣೆ ನೀಡಿದರು.