[1]ಮಂಗಳೂರು : ಮೆಸ್ಕಾಂನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಗ್ಯಾಂಗ್ಮ್ಯಾನ್ ಗಳಿಗೆ ಕೆಲಸ ಖಾಯಂಗೊಳಿಸುವಂತೆ ಜಯಕರ್ನಾಟಕ ಸಂಘಟನೆ ಕರ್ನಾಟಕ ಸರಕಾರದ ಉಸ್ತುವಾರಿ ಸಚಿವರಿಗೆ ಗುರುವಾರ ಮಂಗಳೂರು ಜಿಲ್ಲಾಧಿಕಾರಿ ಕಛೇರಿಯ ಸಚಿವರ ಕಛೇರಿಯಲ್ಲಿ ಮನವಿ ಮಾಡಿತು.
2010 ರಿಂದ 2019 ಸೆಪ್ಟೆಂಬರ್ 30 ರ ತನಕ ಮಂಗಳೂರು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸುಮಾರು 679 ಗ್ಯಾಂಗ್ಮ್ಯಾನ್ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಕೆಪಿಟಿಸಿಯಲ್ ಗ್ಯಾಂಗ್ಮ್ಯಾನ್ ಗಳನ್ನು ಸ್ಥಳೀಯವಾಗಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಮಾಡಿದ್ದು ಕೆಲಸಗಾರರಿಗೆ ಸೇವಾಭದ್ರತೆ ಇಲ್ಲದೆ ದುಡಿಯುತ್ತಿದ್ದಾರೆ, ಅವರ ವೇತನದ ಬಗ್ಗೆ ಯಾವುದೇ ಭದ್ರತೆ ಇಲ್ಲ, ಕಾನೂನಿನ ಚೌಕಟ್ಟು ಇಲ್ಲ ಎಂದು ಜಯಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ಆರೋಪಿಸಿದ್ದಾರೆ.
ಸುಮಾರು 9 ವರ್ಷಗಳಿಂದ ಮೆಸ್ಕಾಂನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಗ್ಯಾಂಗ್ಮ್ಯಾನ್ ಗಳಿಗೆ ಸೂಕ್ತ ಸೇವಾಭದ್ರತೆ ಒದಗಿಸಲು ಉಚ್ಚನ್ಯಾಯಾಲಯದಲ್ಲಿ ಪ್ರಕರಣದಾಖಲಿಸಿದ ಮೇಲೆ 68 ನೇ ಮೆಸ್ಕಾಂ ನಿಗಮ ಸಭೆಯಲ್ಲಿ ಪ್ರಸ್ತಾಪ ಮಂಡನೆಯಾದರೂ ಗ್ಯಾಂಗ್ಮ್ಯಾನ್ ಗಳಿಗೆ ಸೂಕ್ತ ಸೇವಾಭದ್ರತೆ ಇದುವರೆಗೂ ಒದಗಿಸಿಲ್ಲ ಎಂದು ಅವರು ಆರೋಪಿಸಿದರು.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮೆಸ್ಕಾಂ ಎಂಡಿ ಜೊತೆ ಮಾತನಾಡಿ ಸಂಬಂಧಪಟ್ಟ ಮಂತ್ರಿಗಳ ಮೂಲಕ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಪ್ರಯತ್ನಿಸುವುದಾಗಿ ಹೇಳಿದರು.