ಮಂಗಳೂರು : ಭಾರತೀಯರಲ್ಲೂ ಹೆಚ್ಚು ರಬ್ಬರ್ ಉತ್ಪಾದನೆ ಮಾಡುವ ಸಾಮರ್ಥ್ಯ ಇದೆ. ಆದ್ದರಿಂದ ಇಳುವರಿಯನ್ನು ಹೆಚ್ಚು ಮಾಡುವ ಕಾರ್ಯ ಆಗಬೇಕಿದೆ ಎಂದು ಭಾರತ ರಬ್ಬರ್ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಕೆ.ಎನ್.ರಾಘವನ್ ಹೇಳಿದರು.
ನಗರದ ಎಸ್ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ರಬ್ಬರ್ ಬೆಳೆಗಾರರ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಸಾಮರ್ಥ್ಯ ಹೆಚ್ಚಿಸಲು ತಯಾರಿದ್ದೇವೆ. ಮರಗಳನ್ನು ಕಂಪನಿಗಳ ಮೂಲಕ ಪಡೆದು ರಬ್ಬರ್ ಟ್ಯಾಪರ್ಸ್ ಬ್ಯಾಂಕ್ಗಳನ್ನು ಮಾಡಿ, ಅದಕ್ಕೆ ತಗುಲುವ ಖರ್ಚು ವೆಚ್ಚ ಕಡಿತ ಮಾಡಿ ಉಳಿದ ಹಣವನ್ನು ತಮ್ಮ ಬ್ಯಾಂಕುಗಳ ಮೂಲಕ ಜಮೆ ಮಾಡುವ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು.
ರಬ್ಬರ್ಗೆ ಭವಿಷ್ಯವಿದೆ. ಆದರೆ ಅದರ ಬೆಲೆಯಲ್ಲಿ ಏರಿಳಿತ ಮಾಮೂಲಿ. 2013ರಲ್ಲಿ ರಬ್ಬರ್ ಬೇಡಿಕೆ ಹೆಚ್ಚಾದ ಕಾರಣ ಎಲ್ಲರೂ ರಬ್ಬರ್ ಬೆಳೆಯಲು ಆರಂಭಿಸಿದರು. ನಂತರ ಅದರ ಬೆಲೆ ಕುಸಿಯಿತು. ಚರಿತ್ರೆ ನೋಡಿದರೆ ರಬ್ಬರ್ನಷ್ಟು ಆಶಾದಾಯಕ ಬೆಳೆ ಮತ್ತೊಂದಿಲ್ಲ. ಆದ್ದರಿಂದ ಎಲ್ಲರೂ ತಮ್ಮ ರಬ್ಬರ್ ತೋಟಗಳನ್ನು ವೈಜ್ಞಾನಿಕವಾಗಿ ಟ್ಯಾಪಿಂಗ್ ಮಾಡಬೇಕಾಗಿದೆ ಎಂದರು.
ರಬ್ಬರ್ ಉತ್ಪಾದನೆಯನ್ನು ಹೆಚ್ಚಿಸಲು ಹಾಗೂ ವಾರಕ್ಕೊಮ್ಮೆ ಟ್ಯಾಪಿಂಗ್ ಮಾಡುವ ಮೂಲಕ ಖರ್ಚು ವೆಚ್ಚ ಕಡಿಮೆ ಮಾಡವುದು ಉತ್ತಮ. ಜೊತೆಗೆ ಅಡೂರು ಎಂಬ ರಬ್ಬರ್ ಸಂಸ್ಥೆಯಲ್ಲಿ ಹಲವಾರು ಯುವಕರು ರಬ್ಬರ್ ಟ್ಯಾಪಿಂಗನ್ನು ಆರಂಭಿಸಿ 25-35 ಸಾವಿರ ಆದಾಯ ಪಡೆಯುತ್ತಿದ್ದಾರೆ. ವಾರಕ್ಕೊಮ್ಮೆ ಟ್ಯಾಪಿಂಗ್ ಮಾಡುವುದುರಿಂದ ರಬ್ಬರ್ ಕೃಷಿಯಲ್ಲೂ ಉತ್ತಮ ಆದಾಯ ಪಡೆಯಬಹುದು. ಕರ್ನಾಟಕದಲ್ಲಿ ಪ್ರತೀ ಹೆಕ್ಟೇರ್ಗೆ ಸುಮಾರು 1800 ಕೆಜಿ ಇಳುವರಿ ದೊರೆಯುತ್ತದೆ ಎಂಬುವುದು ಸಂತೋಷದ ವಿಚಾರ ಎಂದು ಹೇಳಿದರು.
ನಮ್ಮ ದೇಶದಲ್ಲಿ ರಬ್ಬರ್ ಬಳಕೆ 12 ಲಕ್ಷ ಟನ್ ಎಂಬುದು ಸಂತೋಷದ ಸಂಗತಿ. ಆದರೆ ಕಳೆದ ವರ್ಷ ನಾವು ಉತ್ಪಾದನೆ ಮಾಡಿದ್ದು ಕೇವಲ 6.5 ಲಕ್ಷ ಟನ್. ರಬ್ಬರ್ನ ಬೆಲೆ 250 ರೂಪಾಯಿ. ಆದರೆ ಅದರ ಬೆಲೆ ಈಗ ಕುಸಿಯುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ತೊಂದರೆಯಿಂದ ಈ ಕುಸಿತ ಕಂಡಿದೆ. ತಕ್ಷಣ ಉಂಟಾದ ಕುಸಿತದಿಂದ ಬಹಳಷ್ಟು ಕೃಷಿಕರು ಆತಂಕಗೊಂಡಿದ್ದಾರೆ. ಕೇರಳ ಸರ್ಕಾರ 150 ರೂ. ಬೆಂಬಲ ಬೆಲೆ ಘೋಷಿಸಿದೆ. ಕರ್ನಾಟಕ ಸರ್ಕಾರವನ್ನು ಸಂಪರ್ಕಿಸಿ ಇಲ್ಲೂ ಕೂಡಾ ಅದೇ ರೀತಿ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದೇವೆ. ಜೊತೆಗೆ ಕೇಂದ್ರ ಸರ್ಕಾರಕ್ಕೂ ಇದೇ ರೀತಿಯಲ್ಲಿ ಒತ್ತಾಯ ಮಾಡಲು ಪ್ರಯತ್ನ ಪಟ್ಟಿದ್ದೇವೆ ಎಂದು ರಾಘವನ್ ಹೇಳಿದರು.
Click this button or press Ctrl+G to toggle between Kannada and English