ನವದೆಹಲಿ : ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರ ಸ್ವಾಮಿ ಸೋಮವಾರ ಬೆಳಗ್ಗೆ ತಿಹಾರ್ ಜೈಲಿಗೆ ಭೇಟಿ ನೀಡಿದ್ದು, ಕಾಂಗ್ರೆಸ್ ನೇತಾರ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಈ ಭೇಟಿ ವಿಚಾರ ಭಾನುವಾರ ರಾತ್ರಿಯೇ ಬಹಿರಂಗವಾಗಿತ್ತು. ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರ ಜತೆಗೆ ಕುಮಾರಸ್ವಾಮಿ ತಿಹಾರ್ ಜೈಲಿಗೆ ಭೇಟಿ ನೀಡಿದ್ದರು.
ಭೇಟಿ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಕುಮಾರಸ್ವಾಮಿ, ರಾಜಕೀಯ ವಿಚಾರಗಳು ಭಿನ್ನವಾಗಿರುತ್ತವೆ. ಆದರೆ, ನಮ್ಮ ವೈಯಕ್ತಿಕ ಒಡನಾಟ ಚೆನ್ನಾಗಿದೆ. ಅದು ರಾಜಕೀಯಕ್ಕಿಂತ ಭಿನ್ನವಾದುದು. ಇದು ನನ್ನ ಖಾಸಗಿ ಭೇಟಿ. ಅವರು ಸದ್ಯ ರಾಜಕೀಯ ದ್ವೇಷವನ್ನು ಎದುರಿಸುತ್ತಿದ್ದಾರೆ. ಅವರ ಮನಸ್ಸಿಗೆ ಧೈರ್ಯ ತುಂಬುವ ಸಲುವಾಗಿ ನಾನು ಇಲ್ಲಿಗೆ ಬಂದೆ. ಈ ಎಲ್ಲ ರಾಜಕೀಯ ವೈಷಮ್ಯದ ವಿರುದ್ಧ ಹೋರಾಡುವ ಕೆಚ್ಚು ಅವರಲ್ಲಿದೆ. ಅವರು ಮಾನಸಿಕವಾಗಿ ತುಂಬ ಬಲವಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮನಿಲಾಂಡರಿಂಗ್ ಪ್ರಕರಣದಲ್ಲಿ ಆರೋಪಿಯಾಗಿ ಡಿ.ಕೆ.ಶಿವಕುಮಾರ್ ಅವರು ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
Click this button or press Ctrl+G to toggle between Kannada and English