[1]ರಾಮನಗರ : ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿನಿಂದ ಬಿಡುಗಡೆಯಾದ ಮೇಲೆ ಇಂದೇ ಮೊದಲಬಾರಿಗೆ ಸ್ವಕ್ಷೇತ್ರ ಕನಕಪುರಕ್ಕೆ ತೆರಳಲಿದ್ದಾರೆ. ಇವತ್ತು ಇಡೀ ದಿನ ಕನಕಪುರದಲ್ಲಿಯೇ ಇರಲಿದ್ದಾರೆ.
ಡಿ.ಕೆ.ಶಿವಕುಮಾರ್ ಬಂಧನವಾದಾಗ ಕನಕಪುರದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿತ್ತು. ಅವರ ಬೆಂಬಲಿಗರ ಆಕ್ರೋಶಕ್ಕೆ ಸಾರ್ವಜನಿಕ ಆಸ್ತಿಪಾಸ್ತಿಗಳು ನಾಶವಾಗಿದ್ದವು.
ನಿನ್ನೆ ತುಮಕೂರಿಗೆ ಭೇಟಿ ನೀಡಿದ್ದ ಡಿ.ಕೆ.ಶಿವಕುಮಾರ್ ಇಂದು ಕನಕಪುರದತ್ತ ಪ್ರಯಾಣ ಬೆಳೆಸಿದ್ದಾರೆ. ಬೆಳಗ್ಗೆ 10.30ಕ್ಕೆ ಮನೆ ದೇವರು ಕೆಂಕೇರಮ್ಮ ದೇವಾಲಯದಲ್ಲಿ ಡಿ.ಕೆ.ಶಿವಕುಮಾರ್ ಕುಟುಂಬ ವಿಶೇಷ ಫೂಜೆ ಸಲ್ಲಿಸಲಿದೆ. ನಂತರ ಮರಳೇಗವಿ ಮಠ, ದೊಡ್ಡಾಲಹಳ್ಳಿಯಲ್ಲಿ ತಂದೆ ಕೆಂಪೇಗೌಡರ ಸಮಾಧಿಗೆ ಡಿ.ಕೆ.ಶಿವಕುಮಾರ್ ಪೂಜೆ ಸಲ್ಲಿಸಲಿದ್ದಾರೆ.
ಅಲ್ಲಿಂದ ಶಿವಗಿರಿ ಕ್ಷೇತ್ರಕ್ಕೆ ತೆರಳಿ ಪೂಜೆ ಸಲ್ಲಿಸಿ, ಕಬ್ಬಾಳಮ್ಮ ದೇವಾಲಯಕ್ಕೆ ಭೇಟಿ ನೀಡಿ ಬಳಿಕ ದೇಗುಲ ಮಠಕ್ಕೆ ತೆರಳಲಿದ್ದಾರೆ. ನಂತರ ಕನಕಪುರ ನಿವಾಸದಲ್ಲಿ ಉಳಿದು ಕುಟುಂಬಸ್ಥರ ಜತೆ ಮಾತುಕತೆ ನಡೆಸಲಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು ಸ್ವಾಗತಿಸಲು ಅಭಿಮಾನಿಗಳು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ನಿನ್ನೆ ಡಿ.ಕೆ.ಶಿವಕುಮಾರ್ ಸಿದ್ಧಗಂಗಾ ಮಠಕ್ಕೆ ತೆರಳಿ ಲಿಂಗೈಕ್ಯ ಶ್ರೀ ಶಿವಕುಮಾರಸ್ವಾಮಿಗಳ ಗದ್ದುಗೆ ದರ್ಶನ ಪಡೆದರು. ಬಳಿಕ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದರು.
ಶ್ರೀಗಳು ಏನು ಮಾತನಾಡಿದರು ಎಂಬ ಪ್ರಶ್ನೆಗೆ ಒಗಟಾಗಿ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಅಕ್ಕಿ ಒಂದು ಕಡೆ ಇರುತ್ತದೆ, ಅರಿಶಿಣ ಇನ್ನೊಂದು ಕಡೆ ಇರುತ್ತದೆ. ಎರಡೂ ಸೇರಿದರೆ ಮಂತ್ರಾಕ್ಷತೆ ಆಗುತ್ತದೆ ಎಂದಷ್ಟೇ ಹೇಳಿದರು.