[1]ನವದೆಹಲಿ : ಕನ್ನಡದಲ್ಲೇ ಟ್ವೀಟ್ ಮಾಡಿ ಶುಭಕೋರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಹಿಮ್ಮಡಿಗೊಳಿಸಿದ್ದಾರೆ.
ಇಂದು ರಾಜ್ಯದಲ್ಲೆಡೆ 64ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ, ರಾಷ್ಟ್ರದ ಬೆಳವಣಿಗೆಗೆ ಕರ್ನಾಟಕ ನೀಡಿದ ಅತ್ಯುನ್ನತ ಕೊಡುಗೆಯನ್ನು ಆಚರಣೆ ಮಾಡುವ ದಿವಸವೇ ಕರ್ನಾಟಕ ರಾಜ್ಯೋತ್ಸವ. ಕನ್ನಡಿಗರ ವಿಶಾಲ ಹೃದಯವಂತಿಕೆ ಹಾಗೂ ಕನ್ನಡ ನಾಡಿನ ಸೌಂದರ್ಯ ಹೆಸರುವಾಸಿಯಾದದ್ದು. ಬರುವ ದಿನಗಳಲ್ಲಿ ಕರ್ನಾಟಕದ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತೇನೆ ಎಂದು ಶುಭಕೋರಿದ್ದಾರೆ.
ಕನ್ನಡದಲ್ಲೇ ಟ್ವೀಟ್ ಮಾಡಿ ಶುಭಕೋರಿರುವುದು ಕನ್ನಡಿಗರಿಗೆ ಸಾಕಷ್ಟು ಖುಷಿಯುಂಟು ಮಾಡಿದ್ದು, ಕೆಲವರು ಜಾಲತಾಣ ಮೂಲಕ ಪ್ರಧಾನಿ ಮೋದಿಗೆ ಧನ್ಯವಾದಗಳನ್ನು ತಿಳಿಸುತ್ತಿದ್ದಾರೆ. ನೀವು ಕನ್ನಡ ಭಾಷೆಯಲ್ಲಿ ಮಾತನಾಡುವುದನ್ನು ಕೇಳುವುದೇ ಚೆಂದ ಮೋದಿ ಅವರೇ, ನೀವು ಹೇಳಿದ ಹಾಗೆ ಕರ್ನಾಟಕ ವಿಶಾಲ ಹೃದಯ ಉಳ್ಳ ಹೆಮ್ಮೆಯ ಕನ್ನಡಿಗರ ನಾಡು ಎಂದು ನೆಟ್ಟಿಗನೊಬ್ಬ ಪ್ರತಿಕ್ರಿಯಿಸಿದ್ದಾರೆ.
ಇದೇ ಮೊದಲೇನಲ್ಲ ಪ್ರತಿ ಬಾರಿ ರಾಜ್ಯೋತ್ಸವ ಬಂದಾಗಲೂ ಪ್ರಧಾನಿ ಮೋದಿ ಹೀಗೆ ಕನ್ನಡದಲ್ಲೇ ಟ್ವೀಟ್ ಮಾಡಿ ಶುಭಕೋರುತ್ತಾರೆ. ಅಲ್ಲದೆ, ಕರ್ನಾಟಕಕ್ಕೆ ಬಂದಾಗ ಮೊದಲು ಕನ್ನಡದಲ್ಲೇ ಭಾಷಣ ಆರಂಭಿಸುತ್ತಾರೆ. ಈ ರೀತಿಯ ಗುಣಗಳು ಪ್ರಧಾನಿ ಮೋದಿ ಅವರ ಜನಪ್ರಿಯತೆಯನ್ನು ಹೆಚ್ಚಿಸಿವೆ.