[1]ಮಂಗಳೂರು: ಕರಾವಳಿ ಜಿಲ್ಲೆಯ ಹಲವು ಭಾಗಗಳಲ್ಲಿ ರವಿವಾರ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಮಳೆಯಿಂದಾಗಿ ಹಲವೆಡೆ ಹಾನಿ ಸಂಭವಿಸಿರುವ ಘಟನೆಯು ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಹಾಗೂ ಸುಳ್ಯದಲ್ಲಿ ಶನಿವಾರ ರಾತ್ರಿ ಹಾಗೂ ರವಿವಾರ ಬೆಳಗಿನ ಜಾವ ಸಾಧಾರಣ ಮಳೆಯಾಗಿದೆ. ಉಳಿದಂತೆ ಪುತ್ತೂರು ಹಾಗೂ ಬಂಟ್ವಾಳ ತಾಲ್ಲೂಕಿನಲ್ಲಿ ಮಳೆಯು ಜೋರಾಗಿದ್ದು ಗುಡುಗು-ಸಿಡಿಲಿನಿಂದ ಕೂಡಿತ್ತು.
ಮಂಗಳೂರು ತಾಲೂಕು ಹಾಗೂ ನಗರ ಪ್ರದೇಶಗಳಲ್ಲಿ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಸಂಜೆ ಪ್ರಾರಂಭವಾದ ಮಳೆ ರಾತ್ರಿಯವರೆಗೂ ಮುಂದುವರಿದಿತ್ತು, ಬೆಳ್ತಂಗಡಿ ತಾಲೂಕಿನಲ್ಲಿ ಸುಮಾರು 2 ತಾಸುಗಳ ಕಾಲ ಗುಡುಗು ಸಿಡಿಲು ಸಹಿತ ಬಿರುಸಿನ ಮಳೆಯಾಗಿದೆ.
ಕಾರ್ಕಳ ತಾಲೂಕಿನಲ್ಲಿ ಗುಡುಗು-ಸಿಡಿಲು ಸಹಿತ ಸಾಧಾರಣ ಮಳೆಯಾಗಿದ್ದು. ಪಡುಬಿದ್ರಿ, ಮಣಿಪಾಲ, ಕಾಪು, ಶಿರ್ವ, ಉಡುಪಿ ಮೊದಾಲೆಡೆ ಗುಡುಗು-ಸಿಡಿಲು ಸಹಿತ ಮಳೆಯಾಗಿದೆ. ನಿರಂತರ ಬಂದ ಮಳೆಯ ಪರಿಣಾಮ ಮೆಸ್ಕಾಂ ಇಲಾಖೆಗೆ ಸಾಕಷ್ಟು ನಷ್ಟವಾಗಿದ್ದು ವಿದ್ಯುತ್ ಕೈಕೊಟ್ಟಿದ್ದು. ಅಸ್ತವ್ಯಸ್ತಗೊಂಡ ವಿದ್ಯತ್ ಪೂರೈಕೆ ವ್ಯವಸ್ಥೆಯನ್ನು ರವಿವಾರ ಸರಿಪಡಿಸಲಾಯಿತು.