[1]ಮಂಗಳೂರು : ಕೊಳ್ತಿಗೆ ಗ್ರಾಮದ ಪಂಬಾರು ಸಮೀಪದ ಪಾರ್ಚೋಲು ಎಂಬಲ್ಲಿ ನವೆಂಬರ್ 10 ಭಾನುವಾರ ಮಧ್ಯಾಹ್ನ ಮರ ಕಡಿಯುತ್ತಿದ್ದ ಮರದ ಕೊಂಬೆಯೊಂದು ಮೈಮೇಲೆ ಬಿದ್ದು, ಮರ ಕಡಿಯಲು ಹೋಗಿದ್ದ ಕಾರ್ಮಿಕರೊಬ್ಬರು ಮೃತಪಟ್ಟರೆನ್ನಲಾದ ನಿಗೂಢ ಘಟನೆ ಸಂಬಂಧಿಸಿ ಬೆಳ್ಳಾರೆ ಠಾಣೆಯಲ್ಲಿ ಸಂಶಯಾಸ್ಪದ ಸಾವಿನ ಪ್ರಕರಣ ದಾಖಲಾಗಿದ್ದು, ಅಲ್ಲದೇ ಅಕ್ರಮವಾಗಿ ಮರ ಕಡಿದ ಪ್ರಕರಣ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಪುತ್ತೂರು ಅರಣ್ಯಾಧಿಕಾರಿಗಳ ಕಛೇರಿಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ನಾಲ್ವರ ವಿರುದ್ಧ ಪ್ರಕರಣ ಪ್ರತ್ಯೇಕವಾಗಿ ದಾಖಲಾಗಿದ್ದು, ಈ ಸಾವಿನ ಬಗ್ಗೆ ಸಾರ್ವಜನಿಕರು ಹಲವಾರು ರೀತಿಯ ಸಂಶಯ ವ್ಯಕ್ತಪಡಿಸುತ್ತಿದ್ದು ಈ ಸಾವಿನ ಸಮಗ್ರ ತನಿಖೆಗೆ ತುಳುನಾಡ ರಕ್ಷಣಾ ವೇದಿಕೆ ಒತ್ತಾಯಿಸುತ್ತದೆ.
ಸಾವಿಗೀಡಾದ ಕಾರ್ಮಿಕ ರಫೀಕ್ ಅಹಮ್ಮದ್ರವರ ಕುಟುಂಬಕ್ಕೆ ಕನಿಷ್ಠ ರೂ.25,00,000/- ಕೂಡಲೇ ಪರಿಹಾರ ನೀಡಬೇಕೆಂದು ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಒತ್ತಾಯಿಸಿದ್ದಾರೆ ಹಾಗೂ ತನಿಖೆ ವಿಳಂಬ ಹಾಗೂ ಪರಿಹಾರ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿರುತ್ತಾರೆ.