[1]ಮೈಸೂರು : ವಿಧವೆಯೋರ್ವರಿಗೆ ಶಾದಿ ಡಾಟ್ ಕಾಮ್ ಮೂಲಕ ಪರಿಚಯವಾದ ವ್ಯಕ್ತಿಯೋರ್ವ ವಿವಾಹವಾಗುವುದಾಗಿ ನಂಬಿಸಿ ಮಹಿಳೆಯ ಬಳಿ ಇದ್ದ 80ಸಾವಿರ ರೂ.ಮೌಲ್ಯದ ಮಾಂಗಲ್ಯ ಸರವನ್ನು ದೋಚಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಪತಿಯನ್ನು ಕಳೆದುಕೊಂಡ ಮಹಿಳೆಯೋರ್ವರು ಮರು ಮದುವೆಯಾಗಲು ಇಚ್ಛಿಸಿದ್ದು, ಅಂತರ್ಜಾಲದ ಶಾದಿ ಡಾಟ್ ಕಾಮ್ ಮೂಲಕ ವರಾನ್ವೇಷಣೆಗಾಗಿ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಇದನ್ನು ವೀಕ್ಷಿಸಿದ ವಿನೀತ್ ರಾಜ್ ಎಂಬಾತ ಮಹಿಳೆಯನ್ನು ಮೊಬೈಲ್ ಮೂಲಕ ಪರಿಚಯ ಮಾಡಿಕೊಂಡು ತಾನು ಚೆನ್ನೈ ನಗರದಲ್ಲಿ ವ್ಯಾಪಾರ ಮಾಡುತ್ತಿದ್ದು ನನ್ನ ಹೆಂಡತಿ ತೀರಿ ಹೋಗಿ 5ವರ್ಷವಾಗಿದೆ. ನಿಮ್ಮನ್ನು ಮದುವೆಯಾಗುತ್ತೇನೆಂದು ನಂಬಿಸಿದ್ದು ನ.18ಕ್ಕೆ ಚಾಮುಂಡಿಬೆಟ್ಟಕ್ಕೆ ಬರುತ್ತಿದ್ದೇನೆ. ನೀವು ಕೂಡ ಬನ್ನಿ ಎಂದು ಪೋನ್ ಮೂಲಕ ಆಹ್ವಾನಿಸಿದ್ದು, ಮಹಿಳೆ ಆತ ಸೂಚಿಸಿದ್ದ ಸ್ಥಳಕ್ಕೆ ತೆರಳಿದ್ದಾರೆ.
ಅಲ್ಲಿಂದ ಇಬ್ಬರೂ ಕಾರಿನಲ್ಲಿ ಚಾಮುಂಡಿಬೆಟ್ಟಕ್ಕೆ ಹೋಗಿದ್ದಾರೆ. ಮಾರ್ಗಮಧ್ಯೆ ಕಾರನ್ನು ನಿಲ್ಲಿಸಿದ ಆತ ನಮ್ಮಿಬ್ಬರ ವಿವಾಹಕ್ಕೂ ಮುನ್ನ ದೋಷಮುಕ್ತವಾಗಬೇಕು. ಅದಕ್ಕಾಗಿ ನಮ್ಮಿಬ್ಬರ ಸರವನ್ನು ಅದಲು ಬದಲಾಯಿಸಿಕೊಳ್ಳಬೇಕು ಎಂದಿದ್ದು, ಆತನ ಮಾತುಗಳನ್ನು ನಂಬಿದ ಮಹಿಳೆ ತನ್ನ ಕತ್ತಿನಲ್ಲಿದ್ದ ಸುಮಾರು 40ಗ್ರಾಂ ತೂಕದ ಜೋಡಿ ತಾಳಿ ಮತ್ತು 4ಗುಂಡುಗಳಿರುವ ಹಗ್ಗದ ಮಾದರಿಯ ಸರವನ್ನು ನೀಡಿದ್ದಾರೆ. ಆತ ಕೂಡ ತನ್ನ ಕತ್ತಿನಲ್ಲಿದ್ದ ಹಗ್ಗದ ಮಾದರಿಯ ಸರವನ್ನು ನೀಡಿದ್ದು, ಬದಲಾಯಿಸಿಕೊಂಡಿದ್ದು, ಕೆಲಸಮಯದ ಬಳಿಕ ನಿಮ್ಮ ಸರವನ್ನು ವಾಪಸ್ ಕೊಡುತ್ತೇನೆಂದು ತಿಳಿಸಿದ್ದಾನೆ ನಂತರ ಕಾರಿನಲ್ಲಿ ಬೆಟ್ಟದಿಂದ ಕೆಳಗಿಳಿದು ಸುದರ್ಶನ್ ಸಿಲ್ಕ್ ನಳಿಗೆಯ 5ನೇ ಮಹಡಿಯಲ್ಲಿರುವ ಅಂಬಾರ್ ಹೋಟೆಲ್ ಗೆ ಮಹಿಳೆಯನ್ನು ಕರೆದೊಯ್ದು ಜ್ಯೂಸ್ ಕೊಡಿಸಿದ್ದಾನೆ. ಈ ನಡುವೆ ಮಹಿಳೆಯು ರೆಸ್ಟ್ ರೂಂಗೆ ಹೋಗಿ ಬರುತ್ತೇನೆಂದು ತಿಳಿಸಿ ಹೋಗಿದ್ದು ಆಕೆ ವಾಪಸ್ ಬರುವಷ್ಟರಲ್ಲಿ ವಿನೀತ್ ರಾಜ್ ನಾಪತ್ತೆಯಾಗಿದ್ದಾನೆ. ವಂಚನೆಗೊಳಗಾದ ಮಹಿಳೆ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ