ಮಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆ ಸಂದರ್ಭ ನಾನೇ ಸಿಎಂ ಎಂದರು. ಕುಮಾರಸ್ವಾಮಿಯ ನಿರ್ಗಮನದ ಬಳಿಕ ಮತ್ತೆ ಅದನ್ನೇ ಹೇಳುತ್ತಿದ್ದಾರೆ. ಆದರೆ, ಅವರ ಗ್ರಹಚಾರ ಸರಿಯಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದರು.
ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ನಳಿನ್ ಕಾಂಗ್ರೆಸ್ ಬುಗರಿ ಆಡಿಸಿದರೆ ನಾವು ಚಕ್ರ ತಿರುಗಿಸುತ್ತೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಒಂದಾಗಿದ್ದಾರೆ. ಚುನಾವಣೆ ಬಳಿಕ ಕೈ-ದಳ ಮೈತ್ರಿ ಸರಕಾರ ರಚನೆ ಮಾಡಿಕೊಳ್ಳುತ್ತಾ ಎಂದು ನಳಿನ್ ಪ್ರಶ್ನಿಸಿದರು.
ಉಪಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಆ ಬಳಿಕ ನಮ್ಮ ಸರಕಾರ ಭದ್ರವಾಗಲಿದ್ದು, ಮುಂದಿನ ಮೂರು ವರ್ಷ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದರು.
ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಯಡಿಯೂರಪ್ಪ ನಿರುದ್ಯೋಗಿ ಆಗಿದ್ದಾರೆ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ನಳಿನ್ ಈ ಬಗ್ಗೆ ಡಿಸೆಂಬರ್ 9ರ ಬಳಿಕ ಉತ್ತರಿಸುತ್ತೇನೆ ಎಂದರು.