ಬಂಟ್ವಾಳ : ರಾಷ್ಟ್ರೀಯ ಪೌರತ್ವ ಕಾಯ್ದೆ ವಿರುದ್ಧ ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ಬಿ.ಸಿ.ರೋಡಿನಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಕಾಂಗ್ರೆಸ್ ನಾಯಕ ಮತ್ತು ನ್ಯಾಯವಾದಿ ಸುಧೀರ್ ಕುಮಾರ್ ರವರು, ರಾಷ್ಟ್ರ ಪೌರತ್ವ ತಿದ್ದುಪಡಿ ಕಾಯ್ದೆ ಎನ್ನುವುದು ಬಿಜೆಪಿಯ ಮತಗಳಿಕೆಯ ಕಾನೂನೇ ಹೊರತು ದೇಶದ ಅಭಿವೃದ್ಧಿಗಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಹಿನ್ನೆಲೆಯಲ್ಲಿ ಒಂದು ಸಮುದಾಯವನ್ನು ವಿಭಜಿಸುವ ಗಲಭೆ ಪೀಡಿತ ಹಿಂಸಾ ಮಾತೃ ಭೂಮಿಯಾಗಲಿದೆ. ನಮಗೆ ಹಿಟ್ಲರ್ ಭಾರತ ಬೇಕಾಗಿಲ್ಲ. ಗಾಂಧೀ ಪ್ರೇರಿತ ಭಾರತ ಬೇಕಾಗಿದೆ ಎಂದ ಅವರು, ಪ್ರಚಲಿತ ವಿದ್ಯಾಮಾನಗಳ, ಕೇಂದ್ರ ಹಾಗೂ ರಾಜ್ಯ ಸರಕಾರ ವಿರುದ್ಧ ವಾಗ್ದಾಳಿ ನಡೆಸಿದರು.
ಇದಕ್ಕೂ ಮೊದಲು ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ರಾಷ್ಟ್ರೀಯ ಪೌರತ್ವ ಕಾಯ್ದೆ ದೇಶದ ಸಾಮರಸ್ಯಕ್ಕೆ ಧಕ್ಕೆ ತರಲಾಗಿದೆ ಎಂದರು. ಜಾತ್ಯಾತೀತರನ್ನು ಅವಹೇಳನ ಮಾಡುವ ಕಾರ್ಯ ನೋವು ತರುತ್ತದೆ. ಮನುಷ್ಯ ಪ್ರೀತಿ ಮಾಡುವವರನ್ನು ಅಪಮಾನ ಮಾಡಲಾಗುತ್ತಿದೆ. ಗಾಂಧಿ ಹತ್ಯೆ ಬೆಂಬಲಿಗರಿದ್ದಾರೆ. ನರೇಂದ್ರ ಮೋದಿ ನೀತಿಗಳು ಸರಿ ಇಲ್ಲ. ಶ್ರೀಮಂತರ, ಬಂಡವಾಳಶಾಹಿಗಳ ಪರ ಇದೆ. ಅತ್ಯಾಚಾರ ನಡೆಯುವುದರ ಕುರಿತು ಬಿಜೆಪಿ ತಲೆಕೆಡಿಸಿಕೊಳ್ಳುತ್ತಿಲ್ಲ. ರಾಹುಲ್ ಹೇಳಿಕೆಗೆ ಟೀಕೆ ಮಾಡಲಾಗುತ್ತಿದೆ. ದೇಶದಲ್ಲಿ ಮತೀಯವಾದ ಮುಂದಿಟ್ಟು ಆಡಳಿತ ನಡೆಸುವುದು ಒಳ್ಳೆಯ ಲಕ್ಷಣವಲ್ಲ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಮಂಜುಳಾ ಮಾಧವ ಮಾವೆ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ, ಪುರಸಭಾ ಸದಸ್ಯರಾದ ವಾಸು ಪೂಜಾರಿ, ಮಹಮ್ಮದ್ ನಂದರಬೆಟ್ಟು, ಮಹಮ್ಮದ್ ಶರೀಫ್, ಸಿದ್ದೀಕ್ ಗುಡ್ಡೆಯಂಗಡಿ, ಗಂಗಾಧರ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಉಪಾಧ್ಯಕ್ಷ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಪಕ್ಷ ಪ್ರಮುಖರಾದ ಸದಾಶಿವ ಬಂಗೇರ, ಯೂಸುಫ್ ಕರಂದಾಡಿ, ಮಹಮ್ಮದ್ ನಂದಾವರ, ಸಿದ್ಧೀಕ್ ಸರವು, ವೆಂಕಪ್ಪ ಪೂಜಾರಿ, ಪರಮೇಶ್ವರ ಎಂ, ಧನಲಕ್ಷ್ಮೀ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.