- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನೀರಾವರಿ ಖಾತೆಯೇ ಬೇಕೆಂದು ಕೇಳಿಲ್ಲ : ದೆಹಲಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

basavaraj [1]

ನವದೆಹಲಿ : ನೀರಾವರಿ ಖಾತೆ ಪಡೆಯಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ರಮೇಶ್ ಜಾರಕಿಹೊಳಿ ನಡುವೆ ಸ್ಪರ್ಧೆ ಇದೆ ಎನ್ನುವ ಮಾತು ಕೇಳಿ ಬಂದಿತ್ತು. ಈ ವಿಚಾರವಾಗಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದು, ನಾನು ನೀರಾವರಿ ಖಾತೆಯೇ ಬೇಕೆಂದು ಕೇಳಿಲ್ಲ ಎಂದಿದ್ದಾರೆ.

ಗೃಹ ಖಾತೆ ಬೇಡ, ಬೇರೆ ಯಾವುದಾದರೂ ಖಾತೆ ನೀಡಿ ಎಂದು ಬಿಎಸ್ವೈ ಎದುರು ಬೊಮ್ಮಾಯಿ ಬೇಡಿಕೆ ಇಟ್ಟಿದ್ದರು ಎನ್ನುವ ಮಾತು ಕೇಳಿ ಬಂದಿತ್ತು. ನಂತರ ಬೊಮ್ಮಾಯಿ ನೀರಾವರಿ ಖಾತೆ ಕೇಳಿದ್ದಾರೆ ಎನ್ನಲಾಗಿತ್ತು. ಈಗ ಈ ವಿಚಾರವಾಗಿ ದೆಹಲಿಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.

“ನಾನು ನೀರಾವರಿ ಖಾತೆಯೇ ಬೇಕೆಂದು ಕೇಳಿಲ್ಲ. ಅಂಥ ಯಾವುದೇ ಚರ್ಚೆಗಳು ಆಗಿಲ್ಲ. ಯಾವುದೇ ವಿಷಯದಲ್ಲಿ ನಾನು ಮಧ್ಯಪ್ರವೇಶ ಮಾಡಿಲ್ಲ. ಯಾರಿಗೆ ಯಾವ ಖಾತೆ ಕೊಡಬೇಕೆಂಬುದು ಸಿಎಂಗೆ ಬಿಟ್ಟ ನಿರ್ಧಾರ. ಅವರ ಮೇಲೆ ನಾನು ಒತ್ತಡ ಹೇರಿಲ್ಲ,” ಎಂದರು ಬೊಮ್ಮಾಯಿ.

ದೆಹಲಿಗೆ ತೆರಳಿದ್ದೇಕೆ ಎನ್ನುವ ಬಗ್ಗೆಯೂ ಸ್ಪಷ್ಟನೆ ನೀಡಿದ ಬಸವರಾಜ ಬೊಮ್ಮಾಯಿ, “ದೆಹಲಿಯಲ್ಲಿ ಇಂದು ಹಣಕಾಸು ಸಚಿವರ ಮಹತ್ವದ ಸಭೆ ಇದೆ. ಈ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ. ಹೈದರಾಬಾದ್ ಕರ್ನಾಟಕ ಮತ್ತಿತರ ಹಿಂದುಳಿದ ಪ್ರದೇಶಗಳಿಗೆ ಹಾಗೂ ಬೆಂಗಳೂರಿಗೆ ಹೆಚ್ಚಿನ ಅನುದಾನ ಕೇಳುತ್ತೇವೆ. ಪೌಷ್ಟಿಕ ಆಹಾರ ಮತ್ತಿತರ ಯೀಜನೆಗಳಿಗೂ ಹೆಚ್ಚಿನ ಅನುದಾನ ಕೇಳಲಿದ್ದೇವೆ. ಪ್ರವಾಹ ಪರಿಹಾರಕ್ಕಾಗಿ ಇನ್ನೂ ಹೆಚ್ಚಿನ ಬೇಡಿಕೆ ಇಡಲಿದ್ದೇವೆ,” ಎಂದರು.