- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವ್ಯಕ್ತಿಯ ಸಂಶಯಾಸ್ಪದ ಸಾವು : ಅನೈತಿಕ ಸಂಬಂಧ ಶಂಕೆ; ಇಬ್ಬರ ವಿಚಾರಣೆ

Murder [1]

ಮಡಿಕೇರಿ : ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ತಮ್ಮ ಮತ್ತು ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚೆಟ್ಟಳ್ಳಿ ಅಭ್ಯತ್‌ಮಂಗಲ ನಿವಾಸಿ ರಾಜು(46) ಎಂಬವರೇ ಮೃತಪಟ್ಟ ವ್ಯಕ್ತಿಯಾಗಿದ್ದು, ರಾಜು ಅವರ ಪತ್ನಿ ಲೀಲಾ ಹಾಗೂ ತಮ್ಮ ಪ್ರಶಾಂತ್ ಎಂಬುವವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಕೂಲಿ ಕಾರ್ಮಿಕರಾಗಿರುವ ರಾಜು ಮತ್ತು ಲೀಲಾ ದಂಪತಿಗಳಿಗೆ ಮೂವರು ಮಕ್ಕಳಿದ್ದಾರೆ. ಡಿ.17ರಂದು ಸಂಜೆ 6.30ರ ಸುಮಾರಿಗೆ ಸ್ಥಳೀಯ ನಿವಾಸಿ ಮಂಜು ಎಂಬುವವರು ರಾಜು ಅವರ ಮನೆಗೆ ತೆರಳಿದಾಗ, ರಾಜು ಕುತ್ತಿಗೆಗೆ ಹಗ್ಗದಿಂದ ಬಿಗಿದುಕೊಂಡ ಸ್ಥಿತಿಯಲ್ಲಿ ಚಾಪೆಯಲ್ಲಿ ಮಲಗಿರುವುದು ಕಂಡು ಬಂದಿದೆ. ಇದರಿಂದ ಸಂಶಯಗೊಂಡ ಮಂಜು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಪತ್ನಿ ಲೀಲಾ ಹಾಗೂ ತಮ್ಮ ಪ್ರಶಾಂತ್ ಅವರನ್ನು ಘಟನೆ ಬಗ್ಗೆ ವಿಚಾರಿಸಿದಾಗ ಸರಿಯಾದ ಮಾಹಿತಿ ನೀಡಲಿಲ್ಲ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಆಗಮಿಸಿದ ಚೆಟ್ಟಳ್ಳಿ ಪೊಲೀಸರು ಹಾಗೂ ಮಡಿಕೇರಿ ಗ್ರಾಮಾಂತರ ಪೊಲೀಸರು ದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಿದರು.

ಮೃತರ ಸಂಬಂಧಿಗಳು ಪತ್ನಿ ಲೀಲಾ ಹಾಗೂ ತಮ್ಮ ಪ್ರಶಾಂತ್ ವಿರುದ್ದ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಇವರಿಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಮೃತ ರಾಜು ಅವರ ಪತ್ನಿ ಲೀಲಾ ಹಾಗೂ ತಮ್ಮ ಪ್ರಶಾಂತ್ ನಡುವೆ ಅನೈತಿಕ ಸಂಬಂಧವಿದ್ದು, ಈ ಬಗ್ಗೆ ದಂಪತಿ ನಡುವೆ ನಿರಂತರ ಕಲಹ ನಡೆಯುತ್ತಿತ್ತು ಎನ್ನುವ ಆರೋಪಗಳು ಕೇಳಿ ಬಂದಿದೆ. ಅನಾಥವಾದ ಮೂವರು ಮಕ್ಕಳು ಬಡ ಕೂಲಿ ಕಾರ್ಮಿಕರಾದ ಅಜ್ಜ ಅಜ್ಜಿಯ ಮನೆಯಲ್ಲಿ ತಮ್ಮ ಮುಂದಿನ ಭವಿಷ್ಯ ಕಳೆಯಬೇಕಾಗಿದೆ. ಪ್ರಕರಣದ ಕುರಿತು ದೂರು ದಾಖಲಿಸಿಕೊಂಡಿರುವ ಮಡಿಕೇರಿ ಗ್ರಾಮಾಂತರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.