[1]ಉಡುಪಿ: ಪೇಜಾವರ ಮಠದ 32 ನೇ ಯತಿಗಳಾದ ವಿಶ್ವೇಶತೀರ್ಥ ಶ್ರೀಗಳು ಪೇಜಾವರ ಮಠದಲ್ಲಿ ಆದಿತ್ಯವಾರ ಬೆಳಿಗ್ಗೆ 9.30ಕ್ಕೆ ಕೊನೆಯುಸಿರೆಳೆದಿದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳನ್ನು ಅವರ ಕೊನೆಯ ಆಸೆಯಂತೆ ಉಡುಪಿ ಕೃಷ್ಣಮಠಕ್ಕೆ ಸ್ಥಳಾಂತರಿಸಲಾಗಿತ್ತು. ವೈದ್ಯರೂ ಮಠದಲ್ಲೇ ಚಿಕಿತ್ಸೆ ಮುಂದುವರೆಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ 88 ವರ್ಷ ವಯಸ್ಸಿನ ಪೇಜಾವರ ಶ್ರೀಗಳು ಇಹಲೋಕ ತ್ಯಜಿಸಿದ್ದಾರೆ.
ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ಪೇಜಾವರ ಶ್ರೀಗಳ ಪಾರ್ಥಿವ ಶರೀರ ರವಾನೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರಿಗೆ ದರ್ಶನ. ವಿದ್ಯಾಪೀಠದಲ್ಲಿ ಮಠದ ಶಿಷ್ಯರಿಗೆ ಮಾತ್ರ ದರ್ಶನಕ್ಕೆ ಅವಕಾಶ. ವಿದ್ಯಾಪೀಠ ಟ್ರಸ್ಟ್ನಿಂದ ಮಾಹಿತಿ
ಪೇಜಾವರ ಶ್ರೀಗಳ ಪಾರ್ಥಿವ ಶರೀರವನ್ನು ಕನಕನ ಕಿಂಡಿ ಎದುರು ತಂದು ಶ್ರೀಕೃಷ್ಣನ ದರ್ಶನ ಮಾಡಿಸಲಾಯ್ತು. ಬಳಿಕ ಮಧ್ವ ಸರೋವರದಲ್ಲಿ ಮುಳುಗು ಸ್ನಾನದ ಬಳಿಕ ಶ್ರೀಕೃಷ್ಣಮಠದ ತೀರ್ಥಮಂಟಪದಲ್ಲಿ ಶ್ರೀಕೃಷ್ಣನಿಗೆ ಪೇಜಾವರಶ್ರೀಗಳಿಂದಲೇ ಅಂತಿಮ ಆರತಿ ಮಾಡಿಸಲಾಯ್ತು. ಬಳಿಕ ರಥಬೀದಿಗೊಂದು ಸುತ್ತು ತಂದು ಅಜ್ಜರಕಾಡಿಗೆ ಕರೆದೊಯ್ಯಲಾಯಿತು. ಅಜ್ಜರಕಾಡಿನಲ್ಲಿ ಸಾರ್ವಜನಿಕ ದರ್ಶನದ ಬಳಿಕ ಆದಿ ಉಡುಪಿಯಿಂದ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿಗೆ ರವಾನಿಸಲು ನಿರ್ಧರಿಸಲಾಗಿದೆ.