[1]ಮಂಗಳೂರು : ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹೆಸರಿನಲ್ಲಿ ಡಿ.19 ರಂದು ನಗರದಲ್ಲಿ ಗಲಭೆ ಮತ್ತು ಹಿಂಸಾಚಾರ ನಡೆಸಿ ಪೋಲೀಸರ ಮೇಲೆ ಹಲ್ಲೆ, ಇಬ್ಬರ ಸಾವಿಗೆ ಕಾರಣವಾದ ಘಟನೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್ ತನಿಖೆ ಆರಂಭವಾಗಿದೆ.
ಅಧಿಕಾರಿಗಳ ತಂಡದಿಂದ ಘಟನಾ ಸ್ಥಳಗಳ ಪರಿಶೀಲನೆ ಜಿ.ಜಗದೀಶ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಗಲಭೆ ನಡೆದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಸ್ಟೇಟ್ ಬ್ಯಾಂಕ್ ಪರಿಸರ, ನೆಲ್ಲಿಕಾಯಿ ರಸ್ತೆ ಹಾಗೂ ಬಂದರು ರಸ್ತೆ ಪರಿಸರದಲ್ಲಿ ಮಹಜರು ನಡೆಸಿ ಘಟನೆಯ ವಿವರಗಳನ್ನು ಸಂಗ್ರಹಿಸಿದೆ.
ಗೋಲಿಬಾರ್ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದರು. ಈ ಹಿನ್ನೆಲೆ ಡಿ.26 ರಂದು ಪೂರ್ವಭಾವಿಯಾಗಿ ನಗರಕ್ಕೆ ಬಂದಿದ್ದ ಸಿಐಡಿ ಎಸ್ಪಿ ರಾಹುಲ್ ಕುಮಾರ್ ಶಹಾಪುರವಾಡ್ ನೇತೃತ್ವದ ಸಿಐಡಿ ಪೊಲೀಸರ ತಂಡ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿತ್ತು.