ಹಾವೇರಿ : ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಅನಾಮಧೇಯ ವ್ಯಕ್ತಿಯೋರ್ವ ಕರೆ ಮಾಡಿ ಬೆದರಿಕೆ ಹಾಕಿದ್ದ. ಇನ್ನು 48 ತಾಸುಗಳಲ್ಲಿ ಹತ್ಯೆ ಮಾಡುವುದಾಗಿ ಹೇಳಿದ್ದ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಅಪರಿಚಿತ ನಂಬರ್ನಿಂದ ಕರೆ ಬಂದಿದ್ದು ತಮಿಳುನಾಡಿನಿಂದ ಎಂಬುದು ಗೊತ್ತಾಗಿದೆ. ಆ ನಂಬರ್ನ್ನು ಪರಿಶೀಲನೆ ಮಾಡಲಾಗಿದೆ ಎಂದಿದ್ದಾರೆ.
ಬೆದರಿಕೆ ಕರೆ ಬಗ್ಗೆ ಎಲ್ಲ ರೀತಿಯ ತನಿಖೆ, ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅವರಿಗೆ ಭದ್ರತೆ, ಸುರಕ್ಷತೆ ಒದಗಿಸಲು ಹೇಳಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನೆರೆ ಪರಿಹಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದರೂ ತುಟಿ ಬಿಚ್ಚಲಿಲ್ಲ ಎಂದು ವಿಪಕ್ಷದವರು ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ ಅವರು, ಬರ ಬಂದಾಗ ಅತಿ ಹೆಚ್ಚು ಮುಂಗಾರು, ಹಿಂಗಾರು ಅನುದಾನ ಕೊಟ್ಟಿದ್ದಾರೆ. ವಿರೋಧ ಪಕ್ಷದವರು ಈಗ ಆರೋಪ ಮಾಡುತ್ತಾರೆ. ತಮ್ಮ ಕಾಲದಲ್ಲಿ ಬರ ಹಾಗೂ ವಿಪತ್ತು ಪರಿಹಾರ ಕರ್ನಾಟಕಕ್ಕೆ ಎಷ್ಟು ಬಂದಿದೆ ಎಂದು ಹೇಳಲಿ ಎಂದು ಹೇಳಿದರು.
ಈ ಐದು ವರ್ಷದಲ್ಲಿ ಎಷ್ಟು ಹಣ ಬಂದಿದೆ ಎಂಬುದನ್ನು ನೋಡಬೇಕು. ಬಾಯಿಗೆ ಬಂದಂತೆ ಮಾತನಾಡಬಾರದು. ಇದಕ್ಕೆಲ್ಲ ಸದನದಲ್ಲೇ ಉತ್ತರ ಕೊಡುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು.