ಉಡುಪಿ : ಅದಮಾರು ಮಠದ ಈಶಪ್ರಿಯ ತೀರ್ಥರು ಶನಿವಾರ ಬೆಳಗಿನ ಜಾವ ಕೃಷ್ಣಮಠದಲ್ಲಿ ಪವಿತ್ರ ಸರ್ವಜ್ಞ ಪೀಠಾರೋಹಣ ಮಾಡಿದರು. ಈ ಮೂಲಕ ಅದಮಾರು ಮಠದ ಪರ್ಯಾಯ ಆರಂಭಗೊಂಡಿತು.
ಇದಕ್ಕೂ ಮೊದಲು ಸಂಪ್ರದಾಯದಂತೆ ಕಾಪುವಿನ ದಂಡತೀರ್ಥಕ್ಕೆ ತೆರಳಿ ಮಧ್ಯರಾತ್ರಿ 1.15ಕ್ಕೆ ಸ್ನಾನ ಮಾಡಿ, 1.20ಕ್ಕೆ ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ಉಡುಪಿಯ ಜೋಡುಕಟ್ಟೆಯ ಮಂಟಪಕ್ಕೆ ಆಗಮಿಸಿದ ಶ್ರೀಗಳು ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದರು.
ಇದಾದ ಬಳಿಕ ನಸುಕಿನ 2.15ಕ್ಕೆ ಪರ್ಯಾಯ ಮಹೋತ್ಸವದ ವೈಭವದ ಮೆರವಣಿಗೆಗೆ ಚಾಲನೆ ದೊರೆಯಿತು. ಕರಾವಳಿಯ ಕಲೆ, ಸಂಸ್ಕತಿ ಬಿಂಬಿಸುವ ಟ್ಯಾಬ್ಲೊಗಳು ಗಮನ ಸೆಳೆದವು. ಕರಾವಳಿಯ ಚೆಂಡೆ ನಾದಕ್ಕೆ ನೆರೆದಿದ್ದವರು ಮನಸೋತರು. ಡೊಳ್ಳು ಕುಣಿತ, ಪೂಜಾ ಕುಣಿತ, ಕೋಲಾಟ, ನಗಾರಿ ಸೇರಿದಂತೆ 15ಕ್ಕೂ ಹೆಚ್ಚು ಜಾನಪದ ಕಲಾ ಪ್ರಕಾರಗಳು ಆಕರ್ಷಿಸಿದವು. ಕರಾವಳಿಯ ಮೀನುಗಾರಿಕೆ, ಮಧ್ವಾಚಾರ್ಯರ ಮೂಲಸ್ಥಾನ ಕುಂಜಾರುಗಿರಿ, ಯಕ್ಷಗಾನ, ತುಳುನಾಡು ಸೃಷ್ಟಿಕರ್ತ ಪರಶುರಾಮನ ಟ್ಯಾಬ್ಲೋಗಳು ಆಕರ್ಷಕವಾಗಿದ್ದವು.