ಚಿಕ್ಕಮಗಳೂರು : ವೀಸಾದ ಸಮಯ ಮುಗಿದ ಬಳಿಕ ಯಾವ ದೇಶದಲ್ಲೂ ಇರುವಂತಿಲ್ಲ. ಅದೇ ರೀತಿ ನಮ್ಮ ದೇಶದಲ್ಲೂ ಮಾಡುವುದು ತಪ್ಪಲ್ಲ. ಯಾವುದೇ ದಾಖಲೆ ಇಲ್ಲದೆ ಭಾರತಕ್ಕೆ ಬಂದರೆ ಅದನ್ನ ಸಹಿಸಲು ಆಗಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಚಿಕ್ಕಮಗಳೂರಿನ ರಾಷ್ಟ್ರ ಜಾಗರಣಾ ಸಮಿತಿ ವತಿಯಿಂದ ನಗರದಲ್ಲಿ ನಡೆದ ಪೌರತ್ವ ಕಾಯ್ದೆ ಕುರಿತ ಜನ ಜಾಗರಣಾ ಸಮಾವೇಶದಲ್ಲಿ ಅವರು ಮಾತನಾಡಿದರು. ಭಾರತ ಮೊದಲಿನಿಂದಲೂ ವಿಶ್ವದ ಸಾಕಷ್ಟು ಜನಾಂಗಗಳಿಗೆ ಆಶ್ರಯ ನೀಡಿದೆ. ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ಕಾಯ್ದೆಯಡಿ ಭಾರತದ ಪೌರತ್ವ ನೀಡಲಾಗುತ್ತಿದೆ. ಈ ಪೌರತ್ವ ಕಾಯ್ದೆಯಡಿ ಭಾರತದಲ್ಲೇ ಹುಟ್ಟಿದ ಯಾರಿಗೂ ಯಾವುದೇ ತೊಂದರೆ ಇಲ್ಲ. ಅವರ ಪೌರತ್ವಕ್ಕೂ ಯಾವುದೇ ಸಮಸ್ಯೆ ಆಗಲ್ಲ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಆದರ್ಶ ಗೋಖಲೆ ಮಾತನಾಡಿ, ಸ್ವಾತಂತ್ರ್ಯ ಬರೋದಕ್ಕೂ ಮುಂಚೆ ನಮ್ಮವರೇ ಆಗಿ, ಸ್ವಾತಂತ್ರ್ಯ ಬಂದ ಬಳಿಕ ಬೇರಾದ ಭಾರತದ ಭೂ-ಭಾಗಗಳಲ್ಲಿ ಬದುಕಿದ್ದ ನಮ್ಮವರಿಗೆ ಮತ್ತೆ ಭಾರತದ ಪೌರತ್ವ ನೀಡುವ ಕಾನೂನು ಇದಾಗಿದೆ ಎಂದರು.
ಇದನ್ನ ವಿರೋಧಿಸಿ ದೇಶಾದ್ಯಂತ ಕೆಲವರು ಪ್ರತಿಭಟನೆ ಮಾಡಿಸಿ ದೇಶದ ಏಕತೆ-ಸಮಗ್ರತೆ ಹಾಗೂ ಸಾಂವಿಧಾನಿಕ ಪೀಠಗಳಿಗೆ ಕಪ್ಪು ಚುಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಸಮಾಜಕ್ಕೆ ಪೌರತ್ವ ಕಾಯ್ದೆಯ ಸ್ಪಷ್ಟತೆ ಹಾಗೂ ನಿಜವಾದ ಸಂದೇಶವನ್ನ ತಿಳಿಸುವ ಅವಶ್ಯಕತೆ ಇದು ಎಂದರು.