ಮೈಸೂರು : ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸಿಕೊಂಡು ಬಂದ ಯುವಕನ ನಿಯಂತ್ರಣಕ್ಕೆ ಬೈಕ್ ಸಿಗದ ಕಾರಣ ಬೈಕ್ ಕಂಪೌಂಡ್ ಗೆ ಗುದ್ದಿದ್ದು, ಕಂಪೌಂಡ್ ಗೆ ಅಳವಡಿಸಲಾದ ಕಬ್ಬಿಣದ ಸರಳುಗಳಿಗೆ ಸಿಲುಕಿ ಯುವಕ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೃತ ಯುವಕನನ್ನು ವಿಜಯಶ್ರೀಪುರ ನಿವಾಸಿ ರಾಖಿ(20) ಎಂದು ಗುರುತಿಸಲಾಗಿದ್ದು, ಈತ ನಿನ್ನೆ ರಾತ್ರಿ ಮದ್ಯಪಾನ ಮಾಡಿ ಸ್ಪ್ಲೆಂಡರ್ ಬೈಕ್ ಚಲಾಯಿಸುತ್ತಿದ್ದ. ವಿಜಯ ನಗರ ಟ್ಯಾಂಕ್ ಕಡೆ ಬರುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡ ಬೈಕ್ ಶಾಸಕ ಜಿ.ಟಿ.ದೇವೇಗೌಡರ ಮನೆಯ ಕಂಪೌಂಡ್ ಗೆ ಗುದ್ದಿದ್ದು, ಕಂಪೌಂಡ್ ಗೆ ಅಳವಡಿಸಲಾದ ಕಬ್ಬಿಣದ ಸರಳು ಯುವಕನ ಕತ್ತಿನೊಳಗೆ ಹೊಕ್ಕ ಕಾರಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಕೆ.ಆರ್.ಶವಾಗಾರಕ್ಕೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ವಿವಿಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಡಿದು ವಾಹನ ಚಲಾಯಿಸಿ ಪ್ರಾಣಕ್ಕೆ ಕುತ್ತು ತಂದುಕೊಳ್ಳಬೇಡಿ ಎಂದು ಪೊಲೀಸರು ಎಷ್ಟೇ ವಿನಂತಿಸಿದರೂ ಕೂಡ ಯುವಜನತೆ ಇತ್ತ ಗಮನ ಹರಿಸದೇ ಮದ್ಯದ ನಶೆಯಲ್ಲಿ ವಾಹನ ಚಲಾಯಿಸುತ್ತಿದ್ದು, ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.