- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಆಳ್ವಾಸ್ ಸಾರಥ್ಯ|ಕ್ರೀಡೆಗೆ ಬೌದ್ಧಿಕ, ಮಾನಸಿಕ, ದೈಹಿಕ ಸಮಸ್ಥಿತಿ ಮುಖ್ಯ : ಏಕಲವ್ಯ ಪ್ರಶಸ್ತಿ ಪುರಸ್ಕೃತ ಎಮ್.ಎಸ್.ಪುಟ್ಟರಾಜು

badmitan [1]

ಮೂಡಬಿದಿರೆ : ಕ್ರೀಡಾಪಟು ಸ್ಪರ್ಧೆಗೆ ಇಳಿಯುವುದಕ್ಕಿಂತ ಮೊದಲು ಕ್ರೀಡಾ ಮನೋಧರ್ಮವನ್ನು ಹೊಂದಿದವನಾಗಿರಬೇಕು. ಕ್ರೀಡಾ ಸ್ಫೂರ್ತಿಯಿಂದ ಕ್ರೀಡೆಯಲ್ಲಿ ಸೋಲು ಗೆಲುವನ್ನು ಸ್ವೀಕರಿಸಬೇಕೆಂದು ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ತಂಡದ ಮಾಜಿ ಆಟಗಾರ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಎಮ್. ಎಸ್. ಪುಟ್ಟರಾಜು ಹೇಳಿದರು.

ಆಳ್ವಾಸ್ ಕಾಲೇಜಿನ ಕ್ರೀಡಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮತ್ತು ಆಳ್ವಾಸ್ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾಲಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

badmitan [2]

ಕ್ರೀಡೆಯು ವೈಯಕ್ತಿಕ ಪರಿಶ್ರಮ ಕಲೆ. ಪ್ರತಿಯೊಂದು ಸೋಲಿನಲ್ಲಿಯೂ ಹೆಚ್ಚು ಅನುಭವನ್ನು ಪಡೆಯಬಹುದು. ಬೌದ್ಧಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಸಮಸ್ಥಿತಿಯಲ್ಲಿರಬೇಕಾದ ಕ್ರೀಡೆಯಲ್ಲಿ ಗೆಲುವಿನಲ್ಲಿ ಸಂಭ್ರಮ, ಸೋಲಿನಲ್ಲಿ ನಿರಾಶೆ ಸಲ್ಲದು. ಕ್ರೀಡಾ ಮನೋಭಾವ ಕ್ರೀಡಾಪಟುಗೆ ಮುಖ್ಯ. ಕ್ರೀಡೆಯನ್ನು ಪ್ರೀತಿಯಿಂದ, ಗೌರವದಿಂದ, ಸಧೃಡತೆಯಿಂದ ನೋಡುವವನಾದಾಗ ಮಾತ್ರ ಆತ ನಿಜವಾದ ಕ್ರೀಡಾಳು ಆಗುವುದಕ್ಕೆ ಸಾಧ್ಯ. ಪ್ರತಿ ಕ್ಷಣವೂ ಕ್ರೀಡೆಯಲ್ಲಿ ಅಮೂಲ್ಯವಾದದ್ದು. ಕ್ರೀಡೆಯಲ್ಲಿ ಎಲ್ಲಾ ಸಾಧ್ಯತೆಗಳನ್ನು ಮೀರಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಡಾ, ಎಮ್ ಮೋಹನ್ ಆಳ್ವ ಕ್ರೀಡೆಗೆ ಪ್ರತಿಬಿಂಬದಂತೆ. ಆಳ್ವಾಸ್‌ನಂತಹ ಸಂಸ್ಥೆಗೆ ಮಾತ್ರ ಇಂತಹ ಕ್ರೀಡಾಕೂಟವನ್ನು ಆಯೋಜಿಸುವುದಕ್ಕೆ ಸಾಧ್ಯ. ಕ್ರೀಡಾ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮಹತ್ತರ ಕಾರ್ಯ ಆಳ್ವಾಸ್ ಪರಿಸರದಲ್ಲಿ ಇನ್ನಷ್ಟು ಅನಾವರಣಗೊಳ್ಳಲಿ ಎಂದು ಶುಭ ಹಾರೈಸಿದರು.

ಕ್ರೀಡಾಕೂಟದ ಧ್ವಜಾರೋಹಣಗೈದು ಮಾತನಾಡಿದ ಮಾಜಿ ಸಚಿವ ಅಭಯ್‌ಚಂದ್ರ ಜೈನ್, ಕ್ರೀಡೆ ಸಂಘಟಿತ, ಸ್ಪರ್ಧಾತ್ಮಕತೆಯಿಂದ ಕೂಡಿದ ಚಟುವಟಿಕೆ. ಸ್ಪರ್ಧೆಯ ಫಲಿತಾಂಶವನ್ನು ಕ್ರೀಡಾಪಟು ಧನಾತ್ಮಕವಾಗಿ ಸ್ವೀಕರಿಸಿದಾಗ ಗುರಿ ಮುಟ್ಟಲು ಸಾಧ್ಯ. ಕ್ರೀಡೆಗೆ ಆಳ್ವಾಸ್ ನೀಡುತ್ತಿರುವ ಕೊಡುಗೆ ಅಭಿನಂದನೀಯ ಎಂದರು.

badmitan [3]

ಕ್ರೀಡಾಕೂಟದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಮ್. ಮೋಹನ್ ಆಳ್ವ ವಹಿಸಿದ್ದರು. ಭಾರತದ ಬಾಲ್ ಬ್ಯಾಡ್ಮಿಂಟನ್ ಪೆಡರೇಶನ್‌ನ ಜನರಲ್ ಸೆಕ್ರೆಟರಿ ದಿನೇಶ್ ಕುಮಾರ್ ಈ ಸಂದರ್ಭ ಉಪಸ್ಥಿತರಿದ್ದರು.

ಕ್ರೀಡಾಕೂಟದಲ್ಲಿ ಭಾರತದ 88 ವಿಶ್ವವಿದ್ಯಾಲಯಗಳಿಂದ 920 ಬ್ಯಾಡ್ಮಿಂಟನ್ ಕ್ರೀಡಾಪಟುಗಳು, 500ಕ್ಕೂ ಅಧಿಕ ತರಬೇತುದಾರರು, ಕ್ರೀಡಾಧಿಕಾರಿಗಳು ಹಾಗೂ ಟೀಮ್ ಮ್ಯಾನೇಜರ್‌ಗಳು ಭಾಗವಹಿಸಿದರು. ಮಂಗಳೂರು ವಿಶ್ವವಿದ್ಯಾಲಯದ ಬಾಲ್ ಬ್ಯಾಡ್ಮಿಂಟನ್ ತಂಡದ ನಾಯಕ ಉಲ್ಲಾಸ್ ಎನ್.ವಿ ಕ್ರೀಡಾ ಪ್ರತಿಜ್ಞೆ ವಾಚಿಸಿದರು.

ಕೇಸರಿ, ಬಿಳಿ, ಹಸಿರು ಬಣದ್ಣ ಹೀಲಿಯಂ ಬಲೂನ್‌ಗಳನ್ನು ಈ ಸಂಧರ್ಭದಲ್ಲಿ ಹಾರಿ ಬಿಡಲಾಯಿತು. ಪ್ರಥಮ ದಿನ 30ನಾಕೌಟ್ ಪಂದ್ಯಗಳು ನಡೆದವು.
ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ.ಕೆ ಸ್ವಾಗತಿಸಿ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ವಂದಿಸಿದರು. ರಾಜೇಶ್ ಡಿ’ಸೋಜಾ ಕಾರ್ಯಕ್ರಮ ನಿರ್ವಹಿಸಿದರು.