ಮಂಗಳೂರು : ಮಕ್ಕಳ ಹಕ್ಕುಗಳ ರಕ್ಷಣೆಗಾಗಿ, ಚೈಲ್ಡ್ಲೈನ್-1098ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವರೇ ತೋಟ ಬೆಂಗರೆ ಸ್ಯಾಂಡ್ಸ್ಪಿಟ್ ಅಂಗನವಾಡಿ ಕೇಂದ್ರದಲ್ಲಿ ತೆರೆದ ಮನೆ ಎಂಬ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಮಕ್ಕಳ ಸ್ನೇಹಿ ಮತ್ತು ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಯಾಗಿದ್ದು, ಸ್ಥಳೀಯ ಪ್ರದೇಶದಲ್ಲಿ ಗಾಂಜಾ, ಡ್ರಗ್ಸ್, ಮಾದಕ ವಸ್ತು ಸೇವನೆ, ಮಾರಾಟ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಪೊಲೀಸ್ ಇಲಾಖೆಯನ್ನು ಭಯಮುಕ್ತವಾಗಿ ಸಂಪರ್ಕಿಸುವಂತೆ ಪಣಂಬೂರು ಪೊಲೀಸ್ ಠಾಣೆಯ ಎ.ಎಸ್.ಐ ಅಶೋಕ್ ಕುಮಾರ್ ತಿಳಿಸಿದರು.
ಚೈಲ್ಡ್ಲೈನ್-1098 ದಿನದ24 ಗಂಟೆಯೂ ಕಾರ್ಯನಿರತವಾಗಿದ್ದು, ಸಾರ್ವಜನಿಕರು ತೊಂದರೆಯಲ್ಲಿರುವ ಮಕ್ಕಳನ್ನು ಕಂಡಾಗ ಚೈಲ್ಡ್ಲೈನ್1098ಗೆ ಕರೆಯನ್ನು ಮಾಡಿ ರಕ್ಷಣೆಯನ್ನು ಮಾಡುವಲ್ಲಿ ಸಹಕರಿಸುವಂತೆ, ಕಾರ್ಯಚಟುವಟಿಕೆಯನ್ನು ಮತ್ತು ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ಮಕ್ಕಳ ಹಕ್ಕು, ಶಿಕ್ಷಣದ ಬಗ್ಗೆ ಪ್ರಮುಖ ಅಂಶಗಳನ್ನು ಚೈಲ್ಡ್ಲೈನ್-1098ಸಂಯೋಜಕ ದೀಕ್ಷೀತ್ ಅಚ್ರಪ್ಪಾಡಿ ವಿವರಿಸಿ, ಪ್ರಸ್ತಾವಿಕವಾಗಿ ಮಾತನ್ನಾಡಿದರು.
ಸ್ಥಳೀಯ ಶಾಲೆಗೆ ತರಗತಿ ಕೊಠಡಿಯ ಕೊರತೆ, ಅಂಗನವಾಡಿಗೆ ಸ್ವಂತ ಕಟ್ಟಡ ಇಲ್ಲದೇ ಸಮಸ್ಯೆಯಾಗಿದೆ, ಸ್ಥಳೀಯ ಬಾರ್ ವೈನ್ ಶಾಪ್ನಿಂದ ಫೆರಿ ಬಳಿ ಮದ್ಯಪಾನಿಗಳಿಂದ ಮಕ್ಕಳು, ಮಹಿಳೆಯರಿಗೆ ತೊಂದರೆಯಾಗುತ್ತಿದ್ದು, ತೋಟ ಬೆಂಗರೆ ಪ್ರದೇಶದಲ್ಲಿ ಪೊಲೀಸ್ ಠಾಣೆ ಬೇಕೆಂದು ಬೆಂಗರೆ ಮೊಗವೀರ ಮಹಾಜನ ಸಭಾದ ನಿತ್ಯಾನಂದ ಹೇಳಿದರು.
ಗುಂಪು ಚರ್ಚೆಯನ್ನು ಚೈಲ್ಡ್ಲೈನ್-1098ನ ಆಶಾಲತಾ ಕುಂಪಲ ನಡೆಸಿ, ಕ್ರೋಢಿಕೃತ ಅಂಶಗಳನ್ನು ಅಸುಂತಾ ಡಿ’ಸೋಜ ಮಂಡಿಸಿದರು.
ಕಾರ್ಯಕ್ರಮದಲ್ಲಿ ತೋಟಬೆಂಗರೆ ದ.ಕ.ಜಿ.ಪಂ.ಹಿ.ಪ್ರಾ ಶಾಲಾ ಮುಖ್ಯಶಿಕ್ಷಕಿ ಉಷಾ.ಕೆ, ಅಂಗನವಾಡಿ ಶಿಕ್ಷಕಿ ಮೂಕಾಂಬಿಕ, ಸಹಾಯಕಿ ಮೀನಾಕ್ಷಿ ಉಪಸ್ಥಿತರಿದ್ದರು.
ಮಕ್ಕಳ ಸಹಾಯವಾಣಿಯ ನಾಗರಾಜ್ ಪಣಕಜೆ ನಿರೂಪಿಸಿ, ಕೀರ್ತೀಶ್ ಬಾಳೆಬೈಲು ವಂದಿಸಿದರು. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು, ರೋಶನಿ ನಿಲಯ ಕಾಲೇಜು, ಶ್ರೀದೇವಿ ಕಾಲೇಜಿನ ಎಂ.ಎಸ್.ಡಬ್ಲು ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಶಾಲಾ ವಿಧ್ಯಾರ್ಥಿಗಳು, ಪೋಷಕರು ಸಹಕರಿಸಿದರು.