ಮಂಗಳೂರು : ಅಡ್ಯಾರ್ ಗುತ್ತು ಮಹಾಬಲ ಶೆಟ್ಟಿ ತುಳು ಭಾಷಾಭಿಮಾನಿ. ತುಳು ಭಾಷೆಯ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಿದವರು. ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅವರು ಈ ಹಿಂದೆ ಸಮಾಜದ ಪರ ಕೆಲಸ ಮಾಡಿದವರು. ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆನ್ನುವ ನಿಟ್ಟಿನಲ್ಲಿ ಅವಿರತವಾಗಿ ದುಡಿದವರು. ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ಕುಮಾರ್ ರೈ ಮಾಲಾಡಿ ತಿಳಿಸಿದರು.
ಬಂಟ್ಸ್ಹಾಸ್ಟೆಲ್ನಲ್ಲಿರುವ ಬಂಟರ ಯಾನೆ ನಾಡವರ ಮಾತೃ ಸಂಘದ ಕಚೇರಿಯಲ್ಲಿ ನಡೆದ ಅಡ್ಯಾರ್ ಮಹಾಬಲ ಶೆಟ್ಟಿ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಡ್ಯಾರ್ ಮಹಾಬಲ ಶೆಟ್ಟಿ ಮೂಲತಃ ಕೃಷಿಕರಾಗಿದ್ದು, ದೈವಭಕ್ತರಾಗಿರುತ್ತಾರೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿದವರು. ತುಳು ಭಾಷೆಗಾಗಿ ಸಂಘಟನಾತ್ಮಕವಾಗಿ ಕೆಲಸ ಮಾಡಿದ್ದಾರೆ ಎಂದು ಜಯಶೀಲ ಅಡ್ಯಂತಾಯ ತಿಳಿಸಿದರು.
ಮಹಾಬಲ ಶೆಟ್ಟಿ ಅವರು ಮಂಗಳೂರಿನಲ್ಲಿ ಅಖಿಲ ಭಾರತ ತುಳು ಒಕ್ಕೂಟವನ್ನು ಸ್ಥಾಪಿಸಿ ತುಳು ಸಮ್ಮೇಳನದ ಮೂಲಕ ದೇಶದಲ್ಲಿರುವ ತುಳುವರನ್ನೆಲ್ಲ ಒಂದಡೆ ಸೇರಿಸಿ ತುಳು ಭಾಷೆಯ ಬಗ್ಗೆ ಜಾಗೃತಿ ಮೂಡಿಸಿದವರು. ಅವರೊಬ್ಬ ತುಳುವರಿಗೆ ಯಜಮಾನರಾಗಿದ್ದು, ಕಿರಿಯರಿಗೆ ಆದರ್ಶ ವ್ಯಕ್ತಿಯಾಗಿದ್ದರು ಎಂದು ಸುರೇಂದ್ರ ಕಂಬಳಿ ತಿಳಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಯರಾಮ ಸಾಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲ ಶೆಟ್ಟಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ರೈ, ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ. ಸುಂದರ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಕರುಣಾಕರ ಶೆಟ್ಟಿ, ಆಶಾಜ್ಯೋತಿ ರೈ, ಕೃಷ್ಣರಾಜ ಸುಲಯ, ದಿವಾಕರ ಸಾಮಾನಿ, ಭಾಸ್ಕರ ರೈ ಕಟ್ಟಬೀಡು, ಸವಿತಾ ಚೌಟ, ಉಮೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.