[1]ಮಂಗಳೂರು :ಬಜ್ಪೆ ಬಳಿಯ ಮರವೂರು ಎಂಬಲ್ಲಿ ಕಾರಿನಲ್ಲಿ ಹಿಂದೂ ಯುವಕನೊಂದಿಗೆ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವತಿಯನ್ನು ಯುವಕರ ಗುಪೊಂದು ಹಿಗ್ಗಾಮುಗ್ಗಾ ಥಳಿಸಿ, ಆಕೆಯ ಬಳಿಯಿದ್ದ 3.7 ಲಕ್ಷ ರೂಪಾಯಿ ನಗದು ಹಣವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಶುಕ್ರವಾರ ನಡೆದಿದೆ.
23 ವರ್ಷದ ದೀಬಾ ಅಲ್ಗನಿ ಎಂಬಾಕೆ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಕಾರನ್ನು ಅಡ್ಡಗಟ್ಟಿದ ಯುವಕರ ತಂಡವೊಂದು ಹಿಂದುವಿನೊಂದಿಗೆ ಏಕೆ ಪ್ರಯಾಣಿಸುತ್ತಿದ್ದಿ ಎಂದು ಪ್ರಶ್ನಿಸಿ ಆಕೆಯ ಬಳಿಯಿದ್ದ ಮೊಬೈಲ್ ಹಾಗೂ 3.7 ಲಕ್ಷ ರೂಪಾಯಿಗಳನ್ನು ದೋಚಿದಲ್ಲದೆ, ಆಕೆ ಮತ್ತು ಡ್ರೈವೆರ್ ಧರ್ಮ ಎಂಬುವವರಿಗೂ ಮನಬಂದಂತೆ ಥಳಿಸಿದ್ದಾರೆ. ದೀಬಾ ಅವರ ತಾಯಿ ಜುಬೇದಾ ಅವರು ಪಡುಬಿದ್ರಿ ಗ್ರಾಮ ಪಂಚಾಯತ್ನ ಸ್ವತಂತ್ರ ಸದಸ್ಯೆಯಾಗಿದ್ದು, ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (ಕೆಎಫ್ಡಿ) ಸಂಘಟನೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಬಿಯರಿ ಭಾಷೆಯಲ್ಲಿ ಮಾತನಾಡುತ್ತಿದ್ದ ಅವರನ್ನು ತಾನು ಗುರುತಿಸಬಲ್ಲೆ ಎಂಬುದಾಗಿ ದೀಬಾ ಪೊಲೀಸರಿಗೆ ಹೇಳಿದ್ದಾರೆ.
ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯುವತಿಯನ್ನು ಥಳಿಸಿ ಹಣ ಕಿತ್ತು ಪರಾರಿಯಾದ ಯುವಕರ ತಂಡದ ಹುಡುಕಾಟದಲ್ಲಿ ತೊಡಗಿದ್ದಾರೆ.