ಮಡಿಕೇರಿ : ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಹಿನ್ನೆಲೆ ವಿವಿಧ ಭೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ನ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು.
ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ಗೆ ಸೇರಿಸಬೇಕು ಮತ್ತು ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಲ್ಲೊಂದಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಪ್ರತೀ ವರ್ಷ ಆಕ್ಸ್ಫರ್ಡ್ ಡಿಕ್ಷ್ನರಿಯೂ ಜಗತ್ತಿನ ವಿವಿಧ ಭಾಷೆಗಳ 15 ಸಾವಿರ ಪದಗಳನ್ನು ಆಯ್ಕೆ ಮಾಡಿ ಅಳವಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು ಈ ಆಕ್ಸ್ಫರ್ಡ್ ಡಿಕ್ಷ್ನರಿಯಲ್ಲಿ ಕೊಡವ ಭಾಷೆಯ ಪದಗಳನ್ನು ಸೇರಿಸುವುದರ ಮೂಲಕ ಕೊಡವ ತಕ್ಕ್ ಮತ್ತು ಆಕ್ಸ್ಫರ್ಡ್ ಡಿಕ್ಷ್ನರಿ ಎರಡೂ ಸಮೃದ್ದ ಮತ್ತು ಶ್ರೀಮಂತಗೊಳ್ಳಬೇಕೆಂಬ ಬೇಡಿಕೆಯೊಂದಿಗೆ ಒಟ್ಟು 18 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಬೇಡಿಕೆಗಳು :
ಕೊಡವ ತಕ್ಕ್ ಮಾತೃಭಾಷೆ ಹೊಂದಿರುವ ಕೊಡವ ಬುಡಕಟ್ಟು ಕುಲವನ್ನು ಎಸ್.ಟಿ. ಪಟ್ಟಿಗೆ ಸೇರಿಸಿ ಸಂವಿಧಾನ ಭದ್ರತೆ ನೀಡಬೇಕು, ಕೊಡವ ತಕ್ಕನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಭಾಷೆಗಳಲ್ಲೊಂದಾಗಿ ಪರಿಗಣಿಸಬೇಕು, ಜಾಗತೀಕ ನಳಂದ ವಿಶ್ವವಿದ್ಯಾನಿಲಯ, ಇಂದಿರಾಗಾಂಧಿ ಬುಡಕಟ್ಟು ವಿಶ್ವಿವಿದ್ಯಾನಿಲಯ, ಜೆ.ಎನ್.ಯು. ವಿಶ್ವವಿದ್ಯಾನಿಲಯ, ತಿರುವನಂತಪುರಂ ನಲ್ಲಿರುವ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ದ್ರಾವಿಡಿಯನ್ ಲಿಂಗ್ವಿಸ್ಟಿಕ್ಸ್ ಮತ್ತು ಆಂಧ್ರದ ದ್ರಾವಿಡ ವಿಶ್ವವಿದ್ಯಾನಿಲಯದಲ್ಲಿ ಕೊಡವ ಶಾಸ್ತ್ರ ಮತ್ತು ಕೊಡವ ತಕ್ಕ್ನ ಅಧ್ಯಾಯನ ಪೀಠಗಳನ್ನು ಸ್ಥಾಪಿಸಬೇಕು, ಕೊಡವ ಅಲ್ಪಸಂಖ್ಯಾತ ಬುಡಕಟ್ಟು ಕುಲವನ್ನು ಸಂವಿಧಾನದ 340 ಮತ್ತು 342ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಗೆ ಸೇರಿಸಿ ರಾಜ್ಯಾಂಗ ಖಾತರಿ ನೀಡಬೇಕು. ಕೊಡವ ತಕ್ಕನ್ನು ಆಡಳಿತ ಭಾಷೆಯಾಗಿ ಸಂವಿಧಾನದ 350 ಬಿ ವಿಧಿಯಡಿ ಪರಿಗಣಿಸಬೇಕು, ಕೊಡವ ತಕ್ಕನ್ನು ಸಂವಿಧಾನದ 347ನೇ ವಿಧಿಯ ಪ್ರಕಾರ ಪಠ್ಯ ಕ್ರಮದಲ್ಲಿ ಸೇರಿಸಬೇಕು, ರಾಜ್ಯದ ಎರಡನೇ ಭಾಷೆಯಾಗಿ ಕೊಡವ ತಕ್ಕನ್ನು ಪರಿಗಣಿಸಬೇಕು., ಕೊಡವರನ್ನು ಭಾಷಾ ಅಲ್ಪಸಂಖ್ಯಾತರೆಂದು ಪರಿಗಣಿಸಿ ಸಂವಿಧಾನದ 29 ಮತ್ತು 30 ರನ್ವಯ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ವಿಶೇಷ ಮೀಸಲಾತಿ ಕಲ್ಪಿಸಬೇಕು, ಕನ್ನಡೀಕರಣಗೊಂಡಿರುವ ಕೊಡಗಿನ ಮೂಲ ಗ್ರಾಮಗಳ ಜನಪದೀಯ ಹೆಸರುಗಳನ್ನು ಮತ್ತೇ ಅದೇ ಜನಪದೀಯ ಹೆಸರಿನಿಂದಲೇ ದಾಖಲಿಸಬೇಕು, ಕೊಡವ ಅಲ್ಪಸಂಖ್ಯಾತ ಹಬ್ಬಗಳಾದ ಪುತ್ತರಿ ಕೈಲ್ಪೊವ್ದ್, ಎಡಮ್ಯಾರ್, ಕಕ್ಕಡ ಪದ್ನಟ್, ಕಾರಣಂಗೊಡ್ಪೊ ಮತ್ತು ಕಾವೇರಿ ಚಂಗ್ರಾಂದಿ ಇತ್ಯಾದಿ ಹಬ್ಬಗಳಿಗೆ ಅಧಿಕೃತ ರಜೆ ಘೋಷಿಸಬೇಕು, ಕೊಡವ ತಕ್ಕ್ನ ವಾರ್ತೆಯನ್ನು ದೂರದರ್ಶನ (ಡಿ.ಡಿ ೧) ಮತ್ತು ಆಕಾಶವಾಣಿಯಲ್ಲಿ ಇತರೆ ಪ್ರಮುಖ ಭಾಷೆಗಳಂತೆ ನಿರಂತರ ಭಿತ್ತರಿಸಬೇಕು, ಕೊಡವ ತಕ್ಕ್ನ ಅಧ್ಯಾಯ ಪ್ರಾರಂಭಿಸಲು ಸರ್ಕಾರ ಕಾರ್ಯಕ್ರಮ ರೂಪಿಸಬೇಕು, ಯುನೆಸ್ಕೋದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಲಿಸ್ಟ್ನಲ್ಲಿ ಕೊಡವ ಬುಡಕಟ್ಟು ಜಾನಪದ ಲೋಕದ ಸಾಂಸ್ಕೃತಿಕ ಅನನ್ಯತೆ ಮತ್ತು ಪಾರಂಪರಿಕ ಅಪೂರ್ವತೆಯನ್ನು ಅಧಿಕೃತವಾಗಿ ದಾಖಲಿಸಬೇಕು, ದೆಹಲಿ ಹಟ್ನಲ್ಲಿ ಕೊಡವ ಸಾಂಪ್ರದಾಯಿಕ ತಿನಿಸು/ಅಡುಗೆಯ ಮಳಿಗೆ ಸ್ಥಾಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕಲಿಯಂಡ ಪ್ರಕಾಶ್, ಜಮ್ಮಡ ಮೋಹನ್, ಡಾ.ಬೊವ್ವೇರಿಯಂಡ ಉತ್ತಯ್ಯ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕಲಿಯಂಡ ಮೀನಾಪ್ರಕಾಶ್, ನಂದಿನೆರವಂಡ ವಿಜು, ಮಂದಪಂಡ ಮನೋಜ್, ಚೆಂಬಂಡ ಜನತ್, ಕಾಂಡೇರ ಸುರೇಶ್, ಕಿರಿಯಮಡ ಶರಿನ್, ಅಪ್ಪೇಯಂಗಡ ಮಾಲೆ, ಮಾಚಿಮಾಡ ಲವ, ಅರೆಯಡ ಗರೀಶ್, ಅಳಮಂಡ ಜೈ, ಅಜ್ಜಿಕುಟ್ಟಿರ ಲೋಕೇಶ್, ಪುಟ್ಟಿಚಂಡ ಡಾನ್, ಮಣವಟ್ಟಿರ ಶಿವಣಿ, ಮಣವಟ್ಟಿರ ಜಗದಿಶ್, ಮಣವಟ್ಟಿರ ಸ್ವರೂಪ್, ಮಣವಟ್ಟಿರ ನಂದ, ಪುದಿಯೊಕ್ಕಟ ಕಾಶಿ, ಬೊಟ್ಟಂಗಡ ಗಿರೀಶ್, ಮಣವಟ್ಟಿರ ಚಿಣ್ಣಪ್ಪ, ನಂದಿನೆರವಂಟ ದಿನೇಶ್, ಕಾಟುಮಣಿಯಂಡ ಉಮೇಶ್, ಕೂಪದಿರ ಸಾಬು, ನಾಪಂಡ ಅರುಣ್, ಕೊಂಗೇಟಿರ ಲೋಕೇಶ್, ಪುಲ್ಲೇರ ಕಾಳಪ್ಪ, ಮೇದುರ ಕಂಟಿ ನಂಜಪ್ಪ, ಶಾಂತೆಯಂಡ ನಿರನ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.