ಮಂಗಳೂರು :ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಗುವನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿಯನ್ನು ಬಂಧಿಸಿ, ಮಗುವನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ದ.ಕ. ಎಸ್ಪಿ ಅಭಿಷೇಕ್ ಗೋಯಲ್ ತಿಳಿಸಿದರು.
ಬೆಳ್ತಂಗಡಿ ತಾಲೂಕಿನ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿ ಮಾರಾಟ ಮಾಡಿದ್ದಾರೆ ಎಂಬುದಾಗಿ ಏಪ್ರಿಲ್ 1ರಂದು ಗ್ರಾಮ ಪಂಚಾಯಿತಿಯಿಂದ ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ ಎಂದರು. ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಬೆಳ್ತಂಗಡಿ ತಾಲೂಕಿನ ಉಷಾ ಎಂಬುವವರು ಆಸ್ಪತ್ರೆಗೆ ದಾಖಲಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು. ಮಗುವನ್ನು ತಮ್ಮ ಅಕ್ಕ ಚಂಪಾ, ಆಸ್ಪತ್ರೆಯ ಆಯಾ ಪ್ರಮೀಳಾ ಮತ್ತು ಸುಕನ್ಯಾ, ಗುಲಾಬಿ ಎಂಬುವವರ ಸಹಕಾರದಿಂದ ಕಾಸರಗೋಡು ತಾಲೂಕಿನ ವರ್ಕಾಡಿ ಗ್ರಾಮದ ದೈಗೋಳಿ ನಿವಾಸಿ ಜಯರಾಜ್ ಮತ್ತು ರಾಜೀವಿ ದಂಪತಿಗೆ ಮಗುವನ್ನು 22,000 ರೂ.ಗೆ ಮಾರಾಟ ಮಾಡಲಾಗಿತ್ತು.
ಈ ಪೈಕಿ 10,000 ರೂ. ಗಳನ್ನು ಮಗುವಿನ ತಾಯಿಗೆ ನೀಡಲಾಗಿದ್ದು, ಇನ್ನುಳಿದ 12,000 ರೂ. ಗಳನ್ನು ಲೇಡಿಗೋಶನ್ ಆಸ್ಪತ್ರೆಯ ಪ್ರಮೀಳ ಮತ್ತು ಸುಕನ್ಯಾ ಅವರು ಹಂಚಿಕೊಂಡಿದ್ದರು.
ಮಕ್ಕಳನ್ನು ದತ್ತು ಸ್ವೀಕರಿಸಲು ನಿಯಮಾವಳಿಗಳಿದ್ದು, ಜಯರಾಜ್ ದಂಪತಿ ಅದರ ಪ್ರಕಾರ ದತ್ತು ಸ್ವೀಕರಿಸಿಲ್ಲ. ಈ ಕಾರಣದಿಂದ ಮಗುವನ್ನು ವಶಕ್ಕೆ ತೆಗೆದುಕೊಂಡು ಮಂಗಳೂರು ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಯಲ್ಲಿ ಪುತ್ತೂರು ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಮಗುವಿನ ಆರೈಕೆ ಮಾಡಲಾಗುತ್ತಿದೆ ಎಂದು ಅಧೀಕ್ಷಕ ಅಭಿಷೇಕ್ ಗೋಯಲ್ ಹೇಳಿದರು. ಮತ್ತು ಮಗುವಿನ ಮಾರಾಟಕ್ಕೆ ಸಹಕರಿಸಿದ ಎಲ್ಲರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ರಾಜ್ಯ ಸಮಿತಿ ಸದಸ್ಯರಾದ ವನಿತಾ ತೊರವಿ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಜಿಲ್ಲಾಧ್ಯಕ್ಷರಾದ ಆಶಾ ನಾಯಕ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English