- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದೇವಾಲಯಗಳ ಇತಿಹಾಸ, ಶಾಸನಗಳ ಪ್ರಾಚೀನತೆ ಬಿಂಬಿಸಿದ ಗೋಷ್ಠಿ

ujire [1]

ಧರ್ಮಸ್ಥಳ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಇತಿಹಾಸ ವಿಭಾಗದ ಸಹಯೋಗದೊಂದಿಗೆ ಧರ್ಮಸ್ಥಳದ ವಸಂತ ಮಹಲ್ ಸಭಾಭವನದಲ್ಲಿ ಆಯೋಜಿತವಾದ ಶಾಸನ ಶಾಸ್ತ್ರ ಸಂಘದ 45ನೇ ಮತ್ತು ಸ್ಥಳ ನಾಮ ಸಂಘದ 39ನೇ ಜಂಟಿ ಅಧಿವೇಶನದಲ್ಲಿ ದೇವಾಲಯಗಳ ಇತಿಹಾಸ ಮತ್ತು ಶಾಸನಗಳ ಪ್ರಾಚೀನ ವೈಶಿಷ್ಟ್ಯತೆ ಕುರಿತ ವಿಸ್ತೃತ ವಿಚಾರಗಳು ಪ್ರಸ್ತುತಪಡಿಸಲ್ಪಟ್ಟವು.

ನಾಗರಿಕ ಸಂಹಿತೆ ಮತ್ತು ಪೋರ್ಚುಗಿಸ್ ಶಾಸನಗಳು, ನಾಗಾವ್‌ ಶಾಸನದ ಸಾಮಾಜಿಕ ಸಂಕೇತ, ಆಂಧ್ರದ ಇತ್ತೀಚಿನ ಬ್ರಾಹ್ಮೀ ಶಾಸನಗಳು, ಎರಡನೇ ಹೊಯ್ಸಳ ವೀರಬಲ್ಲಾಳ, ಸೂರ್ಯದೇವ ಮತ್ತು ಅವನ ದೇವಾಲಯದ ಇತಿಹಾಸ, ಹರಪ್ಪ ಶಾಸನ ಎಂಬ ವಿಷಯಗಳ ಮೇಲೆ ಪ್ರಬಂಧ ಮಂಡನೆನಡೆಯಿತು.

ಪೋರ್ಚುಗಿಸ್ ಶಾಸನಗಳಲ್ಲಿ ಮಹಿಳೆಯರಿಗೆ ನೀಡಿರುವ ಹಕ್ಕುಗಳ ಬಗ್ಗೆ ಉಲ್ಲೇಖವಿರುವುದನ್ನು ಡಾ. ಸ್ವಪ್ನ ಸಮೇಲಿ ಮಂಡಿಸಿದರು. ಪೋರ್ಚುಗೀಸ್‌ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಅವರ ಗಂಡನ ಹಾಗೂ ತಂದೆಯ ಆಸ್ತಿಯಲ್ಲಿ ಹಕ್ಕಿತ್ತು. ಆದರೆ ಭಾರತದಲ್ಲಿ ಆ ಅವಕಾಶವಿರಲಿಲ್ಲ. ಪೋರ್ಚುಗೀಸರು ಭಾರತಕ್ಕೆ ಬಂದ ಮೇಲೆ ಮೊದಲು ಗೋವಾದಲ್ಲಿ ಕ್ರಿಶ್ಚಿಯನ್ ಹೆಣ್ಣುಮಕ್ಕಳಿಗೆ ಈ ಹಕ್ಕನ್ನು ನೀಡಿದರು. ಇತ್ತೀಚೆಗೆ ಭಾರತದಎಲ್ಲಾ ಹೆಣ್ಣುಮಕ್ಕಳಿಗೆ ಈ ಹಕ್ಕು ದೊರೆತಿದೆ ಎಂದರು.

ಡಾ. ಅನುರಾಧಾ ಕೆ ರಾನಡೆ, ಮಹಾರಾಷ್ಟ್ರದ ನಾಗಾವ್‌ನಲ್ಲಿರುವ ಶಾಸನದ ಸಾಮಾಜಿಕ ಸಂಕೇತಗಳ ಬಗ್ಗೆ ತಿಳಿಸಿದರು.13ನೇ ಶತಮಾನದಲ್ಲಿ ರಚಿಸಲ್ಪಟ್ಟ ಈ ಶಾಸನ ಸಂಸ್ಕೃತ ಲಿಪಿಯಲ್ಲಿದ್ದು ಮರಾಠಿ ಭಾಷೆಯಲ್ಲಿದೆ. ಬಿ. ಕೆ. ರಾಜವಾಡೆ ಎಂಬುವವರು ಇದನ್ನು ಮೊದಲ ಬಾರಿಗೆ ಶೋಧಿಸಿದರು ಎಂದರು.

ಇತ್ತೀಚೆಗೆ ಆಂಧ್ರದಲ್ಲಿ ದೊರೆತ ಬ್ರಾಹ್ಮೀ ಶಾಸನಗಳ ಕುರಿತಾಗಿಡಾ. ಕೆ. ಮಣಿರತ್ನಂ ವಿಷಯ ಮಂಡಿಸಿದರು. ಶಾತವಾಹನ ರಾಜಕುಮಾರ ಹಕುಸಿರಿಯ ಮುಕ್ಕಾರೋಪೆಟ್ ಶಾಸನ, ಫಣಗಿರಿಯ ಅಯ್ಕಾ ಪಿಲ್ಲರ್ ಹಾಗೂ ಬ್ರಾಹ್ಮೀ ಶಾಸನ, ಶಾತವಾಹನರಾಜ ವಿಜಯನಚೆಬ್ರೋಲು ಶಾಸನದ ಕುರಿತಾಗಿ ಚಿತ್ರಸಹಿತವಾಗಿ ವಿವರಿಸಿದರು.

ತಮಿಳು ಶಾಸನಗಳಲ್ಲಿರುವ ಸೂರ್ಯದೇವ ಹಾಗೂ ಅವನ ದೇವಾಲಯಗಳ ಇತಿಹಾಸದ ಕುರಿತಾಗಿಡಾ. ಕೆ. ಪನ್ನೀರ್ ಸೆಲ್ವಂ ವಿಷಯ ಮಂಡಿಸಿದರು. ಅಷ್ಟಮೂರ್ತಿಗಳಲ್ಲಿ ಸೂರ್ಯನು ಪ್ರಮುಖನಾದವನು. ಆಕಾಶ, ವಾಯು, ಬೆಂಕಿ, ಚಂದ್ರ, ನೀರು, ಭೂಮಿ ಹಾಗೂ ಆತ್ಮ ಇನ್ನುಳಿದವು.

ಸೂರ್ಯನಿಗೆ ತಮಿಳುನಾಡಿನಲ್ಲಿ ಪ್ರಮುಖ ಸ್ಥಾನವಿದೆ. ಸೂರ್ಯನಿಗಾಗಿ ಪ್ರತ್ಯೇಕ ದೇವಾಲಯ ಅಥವಾ ಶಿವನ ದೇವಾಲಯಗಳಲ್ಲಿ ಅವನಿಗೆ ಸ್ಥಾನವಿದೆಎಂದರು.