[1]ಮಂಗಳೂರು :ನಮ್ಮದೇಶದ ಅತೀ ದೊಡ್ಡ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ಕತ್ತಲನ್ನೋಡಿಸಿ ಬೆಳಕನ್ನು ತರುವ ಬೆಳಕಿನ ಹಬ್ಬದೀಪಾವಳಿ. ದೀಪಾವಳಿ ಹಬ್ಬದ ಆಚರಣೆಗೆ ಅವಶ್ಯಕತೆಯಿರುವ ವಸ್ತುಗಳನ್ನು ಖರೀದಿಸಲು ಗ್ರಾಹಕರು ಮುಗಿಬೀಳುತ್ತಿರುವ ದೃಶ್ಯ ಮಂಗಳೂರಿನ ವ್ಯಾಪಾರ ಮಳಿಗೆಗಳಲ್ಲಿ ಬಾನುವಾರದಿಂದಲೇ ಆರಂಭವಾಗಿದೆ. ದೀಪಾವಳಿಯ ಹಬ್ಬದ ಪ್ರಯುಕ್ತ ನಗರದಲ್ಲಿ ಜನರು ಪಟಾಕಿ, ಗೂಡುದೀಪಗಳ ಖರೀದಿಯಲ್ಲಿ ತೊಡಗಿದ್ದು, ನಗರದ ಪಟಾಕಿ ಅಂಗಡಿಗಳಲ್ಲಿ ಜನರು ಪಟಾಕಿ ಖರೀದಿಗಾಗಿ ಮುಗಿಬೀಳುತ್ತಿರುವ ದೃಶ್ಯ ಕಂಡುಬರುತ್ತಿದೆ. ಅಲ್ಲದೆ ಹೂವು, ಹಣ್ಣುಗಳ ಮಾರಾಟ ಭರದಿಂದ ಸಾಗಿದೆ.
[2]ಈ ಬಾರಿ ಪಟಾಕಿ ಬೆಲೆಯಲ್ಲಿ ಶೇ.25ರಿಂದ 30ರಷ್ಟು ಏರಿಕೆಯಾದರೂ ಬೆಲೆ ಏರಿಕೆ ದೀಪಾವಳಿ ಸಂಭ್ರಮಕ್ಕೆ ಅಡ್ಡಿಯಾಗಿಲ್ಲ. ಇಲ್ಲಿನ ವ್ಯಾಪಾರ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿದ್ದು ವಿವಿಧ ಬಣ್ಣಗಳಿಂದ ಕೂಡಿದ, ವಿವಿಧ ಶೈಲಿಯ ಗೂಡುದೀಪಗಳು, ನಾನಾಬಗೆಯ ಪಟಾಕಿಗಳು ಅಂಗಡಿಗಳ ತುಂಬಾ ರಾರಾಜಿಸುತ್ತಿವೆ. ಹೆಚ್ಚಿನ ವ್ಯಾಪಾರ ಮಳಿಗೆಗಳನ್ನು ವಿದ್ಯುತ್ ದೀಪಾಲಂಕರಗಳ ಮೂಲಕ ಸಿಂಗರಿಸಲಾಗಿದೆ. ಅಲ್ಲದೆ ವ್ಯಾಪಾರಿಗಳು ಪಟಾಕಿ ದರದ ಮೇಲೆ ವಿಶೇಷ ರಿಯಾಯಿತಿ ಮತ್ತು ಬಹುಮಾನಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದ್ದಾರೆ. ಸಾವಿರಾರು ರೂಪಾಯಿ ಮೌಲ್ಯದ ಪಟಾಕಿ ಖರೀದಿಸಿದವರಿಗೆ ಉಚಿತ ಉಡುಗೊರೆ ಕೊಡಲಾಗುತ್ತಿದೆ. ಜನರು ಯಾವ ಅಂಗಡಿಯಲ್ಲಿ ಎಷ್ಟು ರಿಯಾಯಿತಿ ಇದೆ ಎಂದು ಕೇಳಿ ಪಟಾಕಿ ಖರೀದಿಸುವ ದೃಶ್ಯ ಕಂಡುಬರುತ್ತಿದೆ. ಒಟ್ಟಾರೆ ನಗರದಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಕಂಡುಬರುತ್ತಿದೆ.