- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಕೊಲೆ ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸರು

azmad [1]

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಗುಂಡಿನ ಶಬ್ಧ ಕೇಳಿ ಬಂದಿದೆ. ಪೊಲೀಸರು ಕೊಲೆ ಆರೋಪಿ ಮೇಲೆ ಫೈರಿಂಗ್ ಮಾಡಿದ್ದಾರೆ. ಯುನೀಸ್ ಬಟ್ಟಿ ಎಂಬ ಕೊಲೆ ಪ್ರಕರಣದ ಆರೋಪಿಯ ಮೇಲೆ ಪೊಲೀಸರು ಇಂದು ಮುಂಜಾನೆ ಗುಂಡು ಹಾರಿಸಿದ್ದಾರೆ.

ದುಷ್ಕರ್ಮಿಗಳ ಒಂದು ಗುಂಪು ಎರಡು ದಿನಗಳ ಹಿಂದೆ ಡಿಜೆ ಹಳ್ಳಿಯಲ್ಲಿ ಮಾರಕಾಸ್ತ್ರಗಳಿಂದ ಬಟ್ಟಿ ಅಮ್ಜಾದ್ ಎಂಬಾತನನ್ನು ಕೊಲೆ ಮಾಡಿತ್ತು. ಕೊಲೆ ಮಾಡಿದ್ದ ಗ್ಯಾಂಗ್ನ ಲೀಡರ್ ಈ ಯುನೀಸ್ ಎಂಬುದು ಬೆಳಕಿಗೆ ಬಂದಿತ್ತು. ಡಿಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿತ್ತು.

ಡಿಜೆ ಹಳ್ಳಿ ಪೊಲೀಸರು ಒಂದು ದಿನದ ಹಿಂದೆ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಇಂದು ಮುಂಜಾನೆ ಕೃತ್ಯಕ್ಕೆ ಬಳಸಿದ್ದ ಮಾರಕಾ ಸ್ತ್ರಗಳನ್ನು ವಶಕ್ಕೆ ಪಡೆಯಲು ತೆರಳಲಾಗಿತ್ತು. ಆರೋಪಿ ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಎನ್ನಲಾಗಿದೆ. ಡಿಜೆ ಹಳ್ಳಿ ಇನ್ಸ್ಪೆಕ್ಟರ್ ಕೇಶವ ಮೂರ್ತಿ ಆರೋಪಿಗೆ ಶರಣಾಗುವಂತೆ ಸೂಚಿಸಿದ್ದರು. ಆದರೂ ಸಹ ಆತ ಪರಾರಿಯಾಗಲು ಯತ್ನಿಸಿದ್ದ. ಆಗ ಇನ್ಸ್ಪೆಕ್ಟರ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗೆ ಎಚ್ಚರಿಕೆ ಕೊಟ್ಟಿದ್ದರು.

ನಂತರವೂ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ. ಆಗ ಪೊಲೀಸರು ಅನ್ಯ ಮಾರ್ಗವಿಲ್ಲದೇ ಆರೋಪಿ ಯುನೀಸ್ ಕಾಲಿಗೆ ಗುಂಡು ಹೊಡೆದಿದ್ದಾರೆ. ಬಳಿಕ ಆತನನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದರು. ಆರೋಪಿ ಯುನೀಸ್ ಮತ್ತು ಗಾಯಗೊಂಡ ಸಿಬ್ಬಂದಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.