- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಭಾರತದಲ್ಲಿ ಮುಂದುವರಿದ ಕೊರೋನಾ ಸೋಂಕು : ಸೋಂಕಿತರ ಸಂಖ್ಯೆ 29ಕ್ಕೆ ಏರಿಕೆ

virus [1]

ನವದೆಹಲಿ : ಚೀನಾದಲ್ಲಿ ಮಹಾಮಾರಿಯಾಗಿ ಹಬ್ಬಿರುವ ಕೊರೋನಾ ವೈರಸ್ ಭಾರತಕ್ಕೂ ಕಾಲಿಟ್ಟಿದೆ. ಈಗಾಗಲೇ 29 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ, ಭಾರತದಲ್ಲಿ ಇದುವರೆಗೂ ಈ ಮಾರಣಾಂತಿಕ ವೈರಸ್ಗೆ ಬಲಿಯಾಗಿರುವ ಯಾವುದೇ ಪ್ರಕರಣ ದಾಖಲಾಗಿಲ್ಲ.

ದೇಶದಲ್ಲಿ ಕೊರೋನಾ ವೈರಸ್ ಭೀತಿ ಹೆಚ್ಚಾಗಿರುವುದರಿಂದ ದೆಹಲಿಯ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಒಂದೇಕಡೆ ಸೇರಿಸುವುದನ್ನು ನಿರ್ಬಂಧಿಸಲಾಗಿದೆ. ಆದಷ್ಟು ಗುಂಪುಗೂಡುವುದನ್ನು ಕಡಿಮೆ ಮಾಡಲು ಸೂಚನೆ ನೀಡಲಾಗಿದೆ. ಒಂದುವೇಳೆ ಮಕ್ಕಳಲ್ಲಿ ಕೆಮ್ಮು, ಕಫ, ಉಸಿರಾಟದ ತೊಂದರೆ, ಜ್ವರದ ಲಕ್ಷಣಗಳು ಕಾಣಿಸಿದರೆ ತಕ್ಷಣ ವೈದ್ಯರ ಬಳಿ ಕರೆದೊಯ್ಯುವಂತೆ ಶಿಕ್ಷಕರು ಪೋಷಕರಿಗೆ ಪತ್ರ ಬರೆದು ಕಳುಹಿಸಿದ್ದಾರೆ.

ಕೊರೋನಾ ವೈರಸ್ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿದೇಶಗಳಿಂದ ಬರುವ ಪ್ರವಾಸಿಗರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಆದರೂ ಭಾರತಕ್ಕೆ ಆಗಮಿಸಿರುವ ಇಟಲಿಯ 14 ಪ್ರವಾಸಿಗರಿಗೆ ಕೊರೋನಾ ವೈರಸ್ ಇರುವುದು ವೈದ್ಯಕೀಯ ಪರೀಕ್ಷೆಯಿಂದ ಧೃಡಪಟ್ಟಿದೆ. ಈ ಬಗ್ಗೆ ದೆಹಲಿಯ ಏಮ್ಸ್ ಆಸ್ಪತ್ರೆ ಬುಧವಾರ ಖಚಿತಪಡಿಸಿತ್ತು. ಈ 14 ಪ್ರವಾಸಿಗರಿಗೆ ಏಮ್ಸ್ನಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜಸ್ಥಾನದಲ್ಲಿರುವ ಇಟಾಲಿಯನ್ ದಂಪತಿ, ಬೆಂಗಳೂರಿನ ಟೆಕ್ಕಿ ಹಾಗೂ ಇಟಲಿಯಿಂದ ಭಾರತಕ್ಕೆ ಆಗಮಿಸಿದವರು ಸೇರಿದಂತೆ ಒಟ್ಟು 29 ಜನರಿಗೆ ಈಗಾಗಲೇ ಕೊರೋನಾ ವೈರಸ್ ತಗುಲಿದೆ. ಭಾರತೀಯರು ಕೊರೋನಾ ಬಗ್ಗೆ ಆತಂಕ ಪಡಬೇಕಾದ ಅಗತ್ಯವಿಲ್ಲ. ಆರೋಗ್ಯ ಇಲಾಖೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದರು.

ಈ ಬಗ್ಗೆ ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಭಾರತದಲ್ಲಿ ಎಲ್ಲ ರೀತಿಯ ಕಟ್ಟೆಚ್ಚರಗಳನ್ನು ವಹಿಸಲಾಗಿದೆ. 12 ದೇಶಗಳಿಂದ ಬರುವ ಎಲ್ಲ ವಿಮಾನಗಳನ್ನು ತಪಾಸಣೆ ನಡೆಸುತ್ತಿದ್ದೇವೆ. ಇನ್ನುಮುಂದೆ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಸುವವರನ್ನು ಕೂಡ ತಪಾಸಣೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.

ಬುಧವಾರದವರೆಗೂ ಒಟ್ಟು 5.89 ಲಕ್ಷ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದ್ದೇವೆ. ಪ್ರಮುಖ ಹಾಗೂ ಸಣ್ಣ ಬಂದರುಗಳಲ್ಲಿ 15 ಸಾವಿರಕ್ಕೂ ಹೆಚ್ಚು ಮತ್ತು ನೇಪಾಳ ಗಡಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಸುಮಾರು 27 ಸಾವಿರ ಜನರ ಮೇಲೆ ಕಣ್ಗಾವಲಿರಿಸಲಾಗಿದೆ. ದೇಶಾದ್ಯಂತ ಮೂವರು ಕೇರಳ, ದೆಹಲಿ, ತೆಲಂಗಾಣದಲ್ಲಿ ಒಬ್ಬೊಬ್ಬರು, ಆಗ್ರಾದಲ್ಲಿ 6, ಇಟಲಿಯಿಂದ ಭಾರತ ಪ್ರವಾಸಕ್ಕೆ ಬಂದಿರುವ 17 ಮಂದಿ ಹಾಗೂ ಗುರುಗ್ರಾಮದಲ್ಲಿ ಓರ್ವನಿಗೆ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.