ಬೆಂಗಳೂರು : ರಾಜ್ಯದಲ್ಲಿನ ಅಭಿವೃದ್ಧಿ ಕೆಲಸಗಳಿಗೆ ಹಣ ಹೊಂದಿರುವ ಸಲುವಾಗಿ ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಶೇ. 3 ಹಾಗೂ ಮಧ್ಯಪಾನದ ಮೇಲಿನ ತೆರಿಗೆಯನ್ನು ಶೇ.6 ರಷ್ಟು ಹೆಚ್ಚಿಸಲು ಮುಂದಾಗಿದೆ.
ಇಂದು ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಬಜೆಟ್ ಮಂಡಿಸಿ ಭಾಷಣ ಮಾಡಿರುವ ಸಿಎಂ ಬಿ.ಎಸ್. ಯಡಿಯೂರಪ್ಪ, “ರಾಜ್ಯದಲ್ಲಿ ಜಿಎಸ್ಟಿ ತೆರಿಗೆ ಹಣ ಸಂಗ್ರಹಣೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.14ರಷ್ಟು ಅಧಿಕವಾಗಿದೆ. ಅಲ್ಲದೆ, ಅಭಿವೃದ್ಧಿಗಾಗಿ ಮತ್ತಷ್ಟು ಹಣ ಸಂಗ್ರಹಿಸುವ ಸಲುವಾಗಿ ಪೆಟ್ರೋಲ್, ಡೀಸೆಲ್ ಮತ್ತು ಅಬಕಾರಿ ತೆರಿಗೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ” ಎಂದು ತಿಳಿಸಿದ್ದಾರೆ.
ಕಳೆದ ವರ್ಷದ ಬಜೆಟ್ನಲ್ಲಿ ಮೈತ್ರಿ ಸರ್ಕಾರದ ನಾಯಕರಾಗಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಧ್ಯದ ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದರು ಆದರೆ. ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 2 ರೂಪಾಯಿಯಷ್ಟು ಇಳಿಸುವ ಮೂಲಕ ಸಮತೋಲನ ಕಾಪಾಡಿದ್ದರು. ಆದರೆ, ಪ್ರಸ್ತುತ ಬಿಜೆಪಿ ಸರ್ಕಾರ ಈ ತೆರಿಗೆ ಪ್ರಮಾಣವನ್ನು ಮತ್ತೆ ಶೇ.3 ರಷ್ಟು ಏರಿಸಿರುವುದು ತೈಲ ಮತ್ತು ದಿನನಿತ್ಯ ಬಳಕೆಯ ವಸ್ತುಗಳು ಮತ್ತಷ್ಟು ಹೆಚ್ಚುವ ಸೂಚನೆ ನೀಡಿದಂತಾಗಿದೆ. ಅಲ್ಲದೆ, ಅಬಕಾರಿ ಸುಂಕವನ್ನೂ ಶೇ.6 ರಷ್ಟು ಹೆಚ್ಚಿಸಿರುವ ಪರಿಣಾಮ ಮಧ್ಯಪ್ರಿಯರ ಜೇಬಿಗೆ ಕತ್ತರಿ ಬೀಳಲಿದೆ.
ಪ್ರಸ್ತುತ ಪೆಟ್ರೋಲ್ ಮೇಲೆ ರಾಜ್ಯ ಸರ್ಕಾರ ಶೇ.32 ರಷ್ಟು ತೆರಿಗೆ ವಿಧಿಸುತ್ತಿದ್ದರೆ, ಡೀಸೆಲ್ ಮೇಲೆ ಶೇ.21ರಷ್ಟು ತೆರಿಗೆ ವಿಧಿಸುತ್ತಿದೆ. ಬಜೆಟ್ ಅನುಷ್ಠಾನಗೊಂಡರೆ ಈ ಪ್ರಮಾಣ ತಲಾ ಶೇ.3ರಷ್ಟು ಹೆಚ್ಚಾಗಲಿದೆ. ಪರಿಣಾಮ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆಯಾಗಲಿದೆ.
Click this button or press Ctrl+G to toggle between Kannada and English