[1]ಮಂಗಳೂರು: ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲೆ, ಪಣಂಬೂರ್ ಬೀಚ್ ಅಭಿವೃದ್ಧಿ ಯೋಜನಾ ಸಂಸ್ಥೆ ಹಾಗೂ ಮಂಗಳೂರು ಅಸೋಸಿಯೇಷನ್ ಆಫ್ ಟ್ರಾವೆಲ್ ಏಜೆಂಟ್ಸ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪ್ರವಾಸೋಧ್ಯಮ ದಿನಾಚರಣೆ 2010ನ್ನು ಇಂದು ಬೆಳಿಗ್ಗೆ ನಗರದ ಪುರಭವನದಲ್ಲಿ ಆಚರಿಸಲಾಯಿತು.
ಪ್ರವಾಸೋಧ್ಯಮ ಮತ್ತು ಜೈವಿಕ ವೈವಿಧ್ಯತೆ ಎಂಬ ಸಂದೇಶದೊಂದಿಗೆ ಆಚರಿಸಲ್ಪಟ್ಟ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
[2]
ತೀರ ಪ್ರದೇಶವನ್ನು ಹೊಂದಿರುವ ಮಂಗಳೂರು ಹಂತ ಹಂತವಾಗಿ ಅಭಿವೃದ್ಧಿಯಾಗುತ್ತಿದೆ. ಅದಕ್ಕಾಗಿ ಸರಕಾರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಅದರಂತೆ ಬೀಚ್, ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿ ಪಥದಲ್ಲಿ ಸಾಗಿದೆ ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ವಿಧಾನ ಸಭಾಕ್ಷೇತ್ರದ ಶಾಸಕ ಯನ್. ಯೋಗೀಶ್ ಭಟ್ ವಹಿಸಿದ್ದರು.
[3]
ಮಲೇಶಿಯಾದ ಪ್ರವಾಸಿ ಅದ್ಯಯನ ತಂಡದ ಜೊತೆಗೆ ನಗರದ ಪ್ರವಾಸ ಅಭಿವೃದ್ಧಿಯ ರೂಪರೇಷೆಗಾಗಿ ಐದು ತಿಂಗಳುಗಳಿಂದ ಅಧ್ಯಯನ ನಡೆಸಲಾಗುತ್ತಿದೆ. ಪ್ರವಾಸ ತಾಣಗಳ ಅಭಿವೃದ್ಧಿಯನ್ನು ಖಾಸಗಿಯವರ ಸಹಭಾಗಿತ್ವದಲ್ಲಿ ನಡೆಸಲಾಗುವುದು ಎಂದು ಅಧ್ಯಕ್ಷೀಯ ಭಾಷಣದಲ್ಲಿ ಯೋಗೀಶ್ ಭಟ್ ಹೇಳಿದರು. ಮಂಗಳಾ ಕಾರ್ನಿಷ್ ಯೋಜನೆಯಿಂದ ನಗರದ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ಪ್ರವಾಸಿಗಳಿಗೆ ಅನುಕೂಲವಾಗುವಂತೆ ಮಾಡಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಸುಲ್ತಾನ್ ಭತ್ತೇರಿ, ಉಳ್ಳಾಲ ದರ್ಗಾ, ನವಗ್ರಹಗಳಿಗೆ ಸಂಬಂಧಪಟ್ಟ ವಿವಿಧ ದೇವಸ್ಥಾನಗಳನ್ನು ಪ್ರಮುಖ ಅಭಿವೃದ್ಧಿ ತಾಣಗಳ ಪಟ್ಟಿಯಲ್ಲಿ ಸೇರಿಸಿ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಹೇಳಿದರು.
[4]
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಜಿಲ್ಲಾಧಿಕಾರಿ ಪೊನ್ನುರಾಜ್, ಮಂಗಳೂರು ಟ್ರಾವೆಲ್ ಏಜೆಂಟ್ಸ್ ಅಸೋಶಿಯೇಷನ್ಸ್ ನ ಅಧ್ಯಕ್ಷರಾದ ರೋಷನ್ ಪಿಂಟೋ, ಲಕ್ಷದೀಪ್ ಟೂರ್ಸ್ ಆಂಡ್ ಟ್ರಾವೆಲ್ಸ್ ನ ರಶೀದ್ ಬೋಳಾರ್, ಪಿಂಟೋ ಟೂರಿಸ್ಟ್ ನ ಲೂಯಿಸ್ ಪಿಂಟೋ ಉಪಸ್ಥಿತರಿದ್ದರು.
ಪಣಂಬೂರು ಬೀಚ್ ಅಭಿವೃದ್ಧಿ ಯೋಜನಾ ಸಮೀಕ್ಷೆಯ ಸಿ.ಇ.ಒ ಯತೀಷ್ ಬೈಕಂಪಾಡಿ ಕಾರ್ಯಕ್ರಮ ನಿರೂಪಿಸಿದರು. ಸೋಮಶೇಖರ್ ಸ್ವಾಗತಿಸಿದರು.