- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಾಂಸ ಆಹಾರ ಸೇವನೆಯಿಂದ ಕೊರೋನಾ ವೈರಸ್ ಹರಡುವುದಿಲ್ಲ : ಸಚಿವ ಡಾ| ಸುಧಾಕರ್

sudhakar [1]

ಬೆಂಗಳೂರು : ಮಾಂಸ ಆಹಾರ ಸೇವನೆ ಮಾಡುವುದರಿಂದ ಮಾರಣಾಂತಿಕ ಕೊರೋನಾ ವೈರಸ್ ಹರಡುವುದಿಲ್ಲ, ಕೆಲವು ಮಾರ್ಗಸೂಚಿಗಳನ್ನು ಅನುಸರಿಸಿ ಆಹಾರ ಸೇವಿಸಿದರೆ ಏನೂ ಸಮಸ್ಯೆ ಇಲ್ಲ. ಹೀಗಾಗಿ ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸಚಿವ ಡಾ|ಸುಧಾಕರ್ ತಿಳಿಸಿದ್ದಾರೆ.

ಕೊರೋನಾ ವೈರಸ್ ರಾಜ್ಯಕ್ಕೂ ಆವರಿಸಿರುವ ಹಿನ್ನೆಲೆ ಜನರ ಆತಂಕವನ್ನು ದೂರ ಮಾಡುವ ಸಲುವಾಗಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಅವರು, “ಕೊರೋನಾ ವೈರಸ್ ಪ್ರಾಣಿಗಳಿಂದ ಹರಡಿರುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಈ ರೀತಿಯ ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಆದರೆ, ಮಾಂಸ ಆಹಾರ ಸೇವನೆಯಿಂದ ಕೊರೋನಾ ಹರಡುತ್ತದೆ ಎಂಬುದು ಶುದ್ಧ ಸುಳ್ಳು. ಹೀಗಾಗಿ ಆಹಾರ ಸೇವನೆಯಲ್ಲಿ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಿದರೆ ಯಾವುದೇ ಸಮಸ್ಯೆ ಇಲ್ಲ” ಎಂದು ಡಾ|ಸುಧಾಕರ್ ತಿಳಿಸಿದ್ದಾರೆ.

ಕೊರೋನಾ ವೈರಸ್ ತಡೆಗೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ ಅವರು, “ರಾಜ್ಯದಲ್ಲಿ ಈ ವೈರಸ್ ಹರಡದಂತೆ ತಡೆಯುವ ಸಲುವಾಗಿ 13.5 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಹಣ ಬಿಡುಗಡೆ ಮಾಡಿದ್ದು, ಕೊರೋನಾ ಕುರಿತು ಪ್ರತಿನಿತ್ಯ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೆ ಸೂಕ್ತ ಮುಂಜಾಗ್ರತಾ ಕ್ರಮ ಜರುಗಿಸಲು ಸೂಚಿಸಿದ್ದಾರೆ.

ಇನ್ನೂ ಕೊರೋನಾ ವೈರಸ್ ಪತ್ತೆಯಾಗಿದ್ದ ಟೆಕ್ಕಿಯ ಆರೋಗ್ಯ ಸುಧಾರಿಸಿದೆ. ವಿದೇಶದಿಂದ ಬೆಂಗಳೂರಿಗೆ ಆಗಮಿಸುವ ಪ್ರತಿಯೊಬ್ಬರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜನ ಗುಂಪುಗಳಲ್ಲಿದ್ದಾಗ ಕೊರೋನಾ ಹರಡುವ ಸಾಧ್ಯತೆ ಇದ್ದು, ಗುಂಪು ಸಮಾರಂಭಗಳಿಂದ ದೂರ ಇರಿ. ಸರ್ಕಾರದ ಮಾರ್ಗಸೂಚಿಗಳನ್ನು ಜನಸಾಮಾನ್ಯರು ಸರಿಯಾಗಿ ಪಾಲಿಸಿದರೆ ಈ ಮಾರಣಾಂತಿಕ ವೈರಸ್ನಿಂದ ಪಾರಾಗಬಹುದು” ಎಂದು ಅವರು ತಿಳಿಸಿದ್ದಾರೆ.