ಬೆಂಗಳೂರು : ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕಾಗಿ ಭೂ ಸ್ವಾಧೀನ ಮಾಡಿಕೊಂಡಿರುವ ರೈತರಿಗೆ ಶೀಘ್ರದಲ್ಲೇ ಭೂ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಭರವಸೆ ನೀಡಿದರು.
ಅರಸೀಕೆರೆಯ ಜೆಡಿಎಸ್ ಶಾಸಕ ಕೆ.ಎನ್.ಶಿವಲಿಂಗೇಗೌಡ ಅವರು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿಉತ್ತರ ನೀಡಿದ ಸಚಿವರು ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕಾಗಿ ರೈತರಿಂದ ಭೂ ಸ್ವಾಧೀನಪಡಿಸಿಕೊಂಡಿದ್ದು ಅವರಿಗೆ ಪರಿಹಾರ ನೀಡುವುದು ಬಾಕಿ ಇದೆ. ಈ ಸಂಬಂಧ ತಕ್ಷಣವೇ ಸಭೆ ಕರೆದು ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಶಿವಲಿಂಗೇಗೌಡರು, ಈ ಯೋಜನೆಗಾಗಿ ಭೂ ಸ್ವಾಧೀನಪಡಿಸಿಕೊಂಡು 6 ವರ್ಷಗಳು ಕಳೆದರೂ ಒಂದು ಪೈಸೆ ಪರಿಹಾರವನ್ನು ರೈತರಿಗೆ ಕೊಟ್ಟಿಲ್ಲ, ತಾವೇ ಖುದ್ದಾಗಿ ರೈತರ ಮನವೊಲಿಸಿದ್ದರಿಂದ ಜಮೀನು ಬಿಟ್ಟುಕೊಟ್ಟಿದ್ದರು. ಈಗ ಆ ರೈತರಿಗೆ ಜಮೀನೂ ಇಲ್ಲ, ಪರಿಹಾರವೂ ಇಲ್ಲಎಂಬಂತೆ ಆಗಿದೆ. ಹೀಗಾಗಿ ನಮ್ಮ ಭಾಗದ ರೈತರು ನಮ್ಮ ಮನೆ ಮುಂದೆ ಧರಣಿ ನಡೆಸುತ್ತಿದ್ದಾರೆ, ಸರಕಾರ ತಕ್ಷಣವೇ ಸ್ಪಂದಿಸಬೇಕೆಂದು ಮನವಿ ಮಾಡಿದರು.