ನವದೆಹಲಿ : ವಿಶ್ವಾದ್ಯಂತ ತನ್ನ ಕರಿನೆರಳು ಬೀರಿ ರಣಕೇಕೆ ಹಾಕುತ್ತಿರುವ ಕಿಲ್ಲರ್ ಕೊರೊನಾ ವೈರಸ್ಗೆ 8 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿಯಾಗಿದ್ದಾರೆ. ಆದರೆ ಕೊರೊನಾ ನಿವಾರಿಸಲು ಪತಂಜಲಿ ಸಂಸ್ಥೆಯ ಬಳಿ ಔಷಧಿ ಇದೆ ಎಂದು ಮಾತನಾಡಿ ಖ್ಯಾತ ಯೋಗ ಗುರು ಬಾಬಾ ರಾಮ್ದೇವ್ ವೈದ್ಯರ ಸಿಟ್ಟಿಗೆ ಕಾರಣವಾಗಿದ್ದಾರೆ.
ಕಳೆದ ಹಲವು ತಿಂಗಳಿಂದ ಜಗತ್ತಿನ ಸುಮಾರು 173ಕ್ಕೂ ಅಧಿಕ ರಾಷ್ಟ್ರಗಳು, ಪ್ರಾಂತ್ಯಕ್ಕೆ ಕೊರೊನಾ ತಲೆನೋವಾಗಿದೆ. ಕೊರೊನಾ ವೈರಸ್ ರೋಗಕ್ಕೆ ಔಷಧಿ ಕಂಡುಹಿಡಿಯಲು ವಿಶ್ವಾದ್ಯಂತ ವಿಜ್ಞಾನಿಗಳು ಹರಸಾಹಸ ಪಡುತ್ತಿದ್ದು, ಸೂಕ್ತ ಔಷಧಿಗಾಗಿ ವೈದ್ಯರು ಪರದಾಡುತ್ತಿದ್ದಾರೆ. ಈ ಮಧ್ಯೆ ಯೋಗ ಗುರು ಬಾಬಾ ರಾಮದೇವ್ ಅವರು ಕೊರೊನಾ ರೋಗಕ್ಕೆ ಆಯುರ್ವೇದದಲ್ಲಿ ಮದ್ದಿದೆ ಎಂದು ಹೇಳಿದ ಮಾತು ಭಾರಿ ಚರ್ಚೆಗೆ ಕಾರಣವಾಗಿದೆ.
ಪತಂಜಲಿ ಸಂಸ್ಥೆಯ ಅಶ್ವಗಂಧ ಉತ್ಪನ್ನದ ಜಾಹಿರಾತಿನಲ್ಲಿ ಮಾತನಾಡಿರುವ ಬಾಬಾ, ಕೊರೊನಾ ವೈರಸ್ ಸೇರಿದಂತೆ ವಿವಿಧ ಮಾರಣಾಂತಿಕ ವೈರಸ್ಗಳಿಗೆ ಆಯುರ್ವೇದದಲ್ಲಿ ಔಷಧವಿದೆ ಎಂದಿದ್ದಾರೆ. ಕೊರೊನಾ ಸೋಂಕಿಗೆ ಅಶ್ವಗಂಧ ಮದ್ದು ಎಂಬುದು ವೈಜ್ಞಾನಿಕ ಸಂಶೋಧನೆಯಲ್ಲಿ ಸಾಬೀತಾಗಿದೆ. ಅಶ್ವಗಂಧ ಮಾನವನ ಪ್ರೋಟಿನ್ ಜೊತೆ ಕೊರೊನಾ ಪ್ರೋಟಿನ್ ಸಮ್ಮಿಲನಗೊಳ್ಳದಂತೆ ಕೆಲಸ ಮಾಡುತ್ತದೆ ಎಂದು ಹೇಳಿಕೊಂಡಿದ್ದರು.
ಅಷ್ಟೇ ಅಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಯೋಗ ಮಾಡಿ ಎಂದು ಬಾಬಾ ರಾಮ್ದೇವ್ ಸಲಹೆ ನೀಡಿದ್ದಾರೆ. #YogaForCorona ಎಂದು ಹ್ಯಾಷ್ಟ್ಯಾಗ್ ಹಾಕಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.