[1]ಉಡುಪಿ :ಮಲ್ಪೆ ಬಂದರಿನಲ್ಲಿ ಅಕ್ರಮವಾಗಿ ಮೀನುಗಾರಿಕೆಯನ್ನು ನಡೆಸಲಾಗುತ್ತಿದೆ ಎಂಬ ಹಿನ್ನಲೆಯಲ್ಲಿ ಶುಕ್ರವಾರ ಮಲ್ಪೆ ಮೀನುಗಾರರು ಬಂದರಿನ ಹೊರಗೆ ನಿಲ್ಲಿಸಿದ್ದ ತಮಿಳುನಾಡಿನ ದೋಣಿಗಳನ್ನು ಅಲ್ಲಿಂದ ತೆರವುಗೊಳಿಸಿ ಪ್ರತಿಭಟಿಸಿದರು. ಶುಕ್ರವಾರ ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ 22 ಮೀನುಗಾರಿಕಾ ಸಂಘಟನೆಗಳು ಪಾಲ್ಗೊಂಡು ಸಭೆ ನಡೆಸಿದವು. ಮೀನುಗಾರರು ಆಕ್ರೋಶಿತರಾಗಿ ತಮಿಳುನಾಡಿನ ಬೋಟ್ಗಳನ್ನು ಹಾನಿಗೀಡು ಮಾಡುವ ಸಾಧ್ಯತೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಅನ್ಯರಾಜ್ಯದ ಎಲ್ಲ ಬೋಟುಗಳನ್ನು ಅಲ್ಲಿಂದ ತೆರವುಗೊಳಿಸಲಾಯಿತು.
ಸರಕಾರ, ಜಿಲ್ಲಾಡಳಿತ ಅಕ್ರಮ ಮೀನುಗಾರಿಕೆ ನಿಷೇಧವನ್ನು ಜಾರಿಗೊಳಿಸಿದ್ದರೂ ತಮಿಳುನಾಡು ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದರೂ ಇಲಾಖೆ ಇದರ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಮೀನುಗಾರರೆ ಬೀದಿಗಿಳಿದು ಹೋರಾಟ ನಡೆಸಿದರು.
ಮೀನುಗಾರಿಕಾ ಇಲಾಖೆ, ಕರಾವಳಿ ಪೊಲೀಸ್ ಇಲಾಖೆ ಮತ್ತು ನಾಗರಿಕ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಮೀನುಗಾರರು ನಾಳೆಯಿಂದ ಅನ್ಯರಾಜ್ಯದ ಬೋಟಗಳು ಮಲ್ಪೆ ಬಂದರಿಗೆ ಬಂದಲ್ಲಿ ಮುಂದೊದಗುವ ಕಷ್ಟ ನಷ್ಟಗಳಿಗೆ ತಾವೇ ಜವಾಬ್ದಾರರಾಗಬೇಕೆಂದು ಎಚ್ಚರಿಸಿದರು.
ಜಿಲ್ಲಾಡಳಿತ, ಸರಕಾರದ ಗಮನಕ್ಕೆ ಈ ವಿಷಯವನ್ನು ತರಲಾಗುವುದು ಮತ್ತು ನಾಳೆಯಿಂದ ಅನ್ಯರಾಜ್ಯದ ಬೋಟುಗಳು ಮಲ್ಪೆ ಬಂದರಿನ ಒಳ ಪ್ರವೇಶಿಸದಂತೆ ತಡೆ ಹಿಡಿಯವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮಲ್ಪೆ ಕರಾವಳಿ ಕಾವಲು ಪೊಲೀಸ್ ಮತ್ತು ಮೀನುಗಾರಿಕಾ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.