[1]ಮಂಗಳೂರು : ದಕ್ಷಿಣ ಕನ್ನಡಕ್ಕೆ ಬಂದ ಕೊರೋನಾ ವೈರಸ್ ನ ಮೂಲ ಹುಡುಕಲಿಕ್ಕೆ ಇನ್ನು ನಮ್ಮ ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಜನಪ್ರತಿನಿಧಿಗಳೇ ಕೊರೋನಾ ಮೂಲ ಹುಡುಕುತ್ತಿರುವುದು ವಿಪರ್ಯಾಸ, ಅವರೇ ಅಧಿಕಾರಿಗಳನ್ನು ತಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.
ಜಿಲ್ಲೆಯ ಅಭಿವೃದ್ಧಿಗೆ ಕಾರ್ಮಿಕರು, ವಲಸೆ ಕಾರ್ಮಿಕರು, ಅನಿವಾಸಿ ಕನ್ನಡಿಗರ ಕೊಡುಗೆ ಬೆಲೆಕಟ್ಟಲಾಗದ್ದು. ಆದರೆ ಸಂಕಷ್ಟದ ಸಂದರ್ಭದಲ್ಲಿ ಅವರೆಲ್ಲರನ್ನೂ ತೀರಾ ನಿರ್ಲಕ್ಷ್ಯದಿಂದ ಕಾಣಲಾಗುತ್ತಿದೆ. ಸಂಕಷ್ಟದಲ್ಲಿದ್ದ ವಲಸೆಕಾರ್ಮಿಕರಿಗೆ ಸಾಂತ್ವನ ಹೇಳಲು ಕಾಂಗ್ರೆಸ್ ನಾಯಕರು ಹೋದರೆ “ಸೋಂಕು ಹರಡಲು ಕಾಂಗ್ರೆಸ್ಸೇ ಕಾರಣ’ಎನ್ನುವ ಮೂಲಕ ಕ್ಷುಲ್ಲಕ ರಾಜಕೀಯ ಮಾಡುತ್ತಾರೆ. ಜನಸಾಮಾನ್ಯರು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳು ವಂತೆ ಮಾಡಿ ಕೊರೊನಾ ನಿಯಂತ್ರಿಸು ವಲ್ಲಿ ಜವಾಬ್ದಾರಿಯುತ ನಡೆಯನ್ನು ಆಡಳಿತ ಪಕ್ಷದವರು ತೋರಬೇಕಾಗಿತ್ತು ಎಂದು ರೈ ಆರೋಪಿಸಿದ್ದಾರೆ.
ಕೋವಿಡ್-19 ಸಂಕಷ್ಟದ ಸಂದರ್ಭ ದಕ್ಷಿಣ ಕನ್ನಡದಲ್ಲಿ ವಲಸೆ ಕಾರ್ಮಿಕರು ಹಾಗೂ ಅನಿವಾಸಿ ಕನ್ನಡಿಗರು ತೊಂದರೆ ಅನುಭವಿಸಲು ಇಲ್ಲಿನ ಚುನಾಯಿತ ಜನಪ್ರತಿನಿಧಿಗಳೇ ಕಾರಣ. ಅಧಿಕಾರಿಗಳ ಕರ್ತವ್ಯದಲ್ಲಿ ಅವರ ಹಸ್ತಕ್ಷೇಪದಿಂದಾಗಿ ಸಮಸ್ಯೆ ಉಲ್ಬಣಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಗಂಜಿ ಕೇಂದ್ರ ತೆರೆದು ಕಾರ್ಮಿಕರು ಸೇರಿದಂತೆ ಜನಸಾಮಾನ್ಯರಿಗೆ ತೊಂದರೆಯಾಗ ದಂತೆ ಕ್ರಮ ಕೈಗೊಳ್ಳಬೇಕಿತ್ತು. ನಮ್ಮ ರಾಜ್ಯ ಸರಕಾರ ಅಂತಹ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರು, ಕಾರ್ಮಿಕ ರಿಗೆ ಗೌರವ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಮುಖಂಡರಾದ ಎಂ. ಶಶಿಧರ ಹೆಗ್ಡೆ, ಅಬ್ದುಲ್ ರವೂಫ್, ಇಬ್ರಾಹಿಂ ಕೋಡಿಜಾಲ್, ಭಾಸ್ಕರ ಕೆ., ಮುಹಮ್ಮದ್ ಮೋನು, ಸದಾಶಿವ ಉಳ್ಳಾಲ, ಶ್ಯಾಲೆಟ್ ಪಿಂಟೋ, ಸದಾಶಿವ ಶೆಟ್ಟಿ, ಸುರೇಂದ್ರ ಕಾಂಬ್ಳಿ, ಬೇಬಿ ಕುಂದರ್, ಹರಿನಾಥ್, ಅಶೋಕ್ ಡಿ.ಕೆ., ಶಾಹುಲ್ ಹಮೀದ್, ಶುಭೋದಯ ಆಳ್ವ, ನಝೀರ್ ಬಜಾಲ್ ಪತ್ರಿಕಾಗೋಷ್ಠಿಯಲ್ಲಿದ್ದರು.