[1]ಉಡುಪಿ : ಅರೋಗ್ಯ ಇಲಾಖೆ ಗುರುವಾರ ಮಧ್ಯಾಹ್ನ ಬಿಡುಗಡೆ ಮಾಡಿದ ಬುಲೆಟಿನ್ನಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 27 ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದೆ.
ಈ ಪೈಕಿ ದುಬೈ ಹಾಗೂ ಮುಂಬೈಯಿಂದ ಬಂದ ಪ್ರಯಾಣಿಕರಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಸ್ವೀಕೃತವಾದ 199 ಜನರ ವರದಿಯಲ್ಲಿ 27 ಜನರಲ್ಲಿ ಪಾಸಿಟಿವ್ ಬಂದಿದ್ದು, ಈ ಪೈಕಿ ಮಹಾರಾಷ್ಟ್ರದಿಂದ ಬಂದ 23 ಜನರಲ್ಲಿ, ತೆಲಂಗಾಣದಿಂದ ಬಂದ ಮೂವರಲ್ಲಿ ಹಾಗೂ ಕೇರಳದಿಂದ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ಒಬ್ಬರಲ್ಲಿ ಪಾಸಿಟಿವ್ ಬಂದಿದೆ. ಇವರಲ್ಲಿ 6 ಮಂದಿ ಪುರುಷರಾಗಿದ್ದು, ಐವರು ಮಹಿಳೆಯರಾಗಿದ್ದಾರೆ, ಆತಂಕಕಾರಿ ವಿಚಾರ ಎಂದರೆ 16 ಮಕ್ಕಳಲ್ಲಿ ಕೊರೊನಾ ದೃಢವಾಗಿದೆ ಚಿಕಿತ್ಸೆಗಾಗಿ ಬಂದಿದ್ದ ಕೇರಳದವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಕ್ವಾರಂಟೈನ್ ಕೇಂದ್ರದಲ್ಲಿದ್ದು ಅವರನ್ನು ಈಗಾಗಲೇ ಕೊವೀಡ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿರುವ 25 ಮಂದಿ ಕೊರೋನ ಸೋಂಕಿತರಲ್ಲಿ 15 ಮಂದಿ ಬೈಂದೂರು ತಾಲೂಕಿನವರು, ಐವರು ಕುಂದಾಪುರ ತಾಲೂಕಿನವರು, ಮೂವರು ಕಾರ್ಕಳ ಹಾಗೂ ಇಬ್ಬರು ಉಡುಪಿ ತಾಲೂಕಿನವರು. ಶಿರಸಿಯಲ್ಲಿ ಕ್ವಾರಂಟೈನ್ನಲ್ಲಿದ್ದು ಪಾಸಿಟಿವ್ ಬಂದಿರುವವರು ಬೈಂದೂರು ತಾಲೂಕಿನ ಶಿರೂರಿನವರು ಎಂದು ತಿಳಿದುಬಂದಿದೆ.
ಕೊರೋನ ಪಾಸಿಟಿವ್ ಬಂದ 27 ಮಂದಿಯಲ್ಲಿ 24 ಮಂದಿಯನ್ನು ಉಡುಪಿ ನಗರದಲ್ಲಿರುವ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿ ಸಲಾಗುತ್ತಿದೆ. ಕೇರಳದಿಂದ ಚಿಕಿತ್ಸೆಗೆ ಬಂದ ಪತಿ ಕೊರೋನಕ್ಕೆ ನೆಗೆಟಿವ್ ಆದರೆ, ಪತ್ನಿ ಪಾಸಿಟಿವ್ ಆಗಿದ್ದಾರೆ. ಇವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ಐಸೋಲೇಷನ್ ವಾರ್ಡಿಗೆ ಸೇರಿಸಲಾಗಿದೆ. ಶಿರಸಿಯಲ್ಲಿ ಕ್ವಾರಂಟೈನ್ನಲ್ಲಿದ್ದು, ಕೊರೋನ ಸೋಂಕು ಪತ್ತೆಯಾಗಿರುವ ತಾಯಿ-ಮಗುವನ್ನು ಕಾರವಾರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.