- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಿಡಿಯೋ ಕಾನ್ಫರೆನ್ಸ್ : ಮುಂಬಯಿ ಕನ್ನಡಿಗರ ಸಮಸ್ಯೆ ಬಗ್ಗೆ ಸಂಸದರ ಮೂಲಕ ಮುಖ್ಯ ಮಂತ್ರಿಗೆ ಮನವಿ

Jayakrishna [1]ಮುಂಬಯಿ : ಕರಾವಳಿಯ ಮೂರು ಜಿಲ್ಲೆಗಳ ಅಭಿವೃದ್ದಿಗಾಗಿ ಕಳೆದ ಹಲವಾರು ವರ್ಷಗಳಿಂದ ಯಶಸ್ವಿ ಹೋರಾಟ ನಡೆಸುತ್ತಾ ಬಂದಿರುವ, ವಿವಿಧ ಸಮಾಜದ ಪ್ರಮುಖರನ್ನೊಳಗೊಂಡ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಮುಂಬಯಿ ಹಾಗೂ ಮಹಾರಾಷ್ಟದಲ್ಲಿರುವ ತುಳು-ಕನ್ನಡಿಗರಿಗೆ ತಾಯ್ನಾಡಿಗೆ ಪ್ರವೇಶಿಸಲು ಅವಕಾಶವನ್ನು ಕೋರಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕರೂ, ಅಧ್ಯಕ್ಷರೂ ಆದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರ ನೇತೃತ್ವದಲ್ಲಿ ಸಮಿತಿ ಯ ವಿಡಿಯೋ ಕಾನ್ಫರೆನ್ಸ್ ಸಭೆ ನಡೆದಿದ್ದು ಇದರಲ್ಲಿ ಮಹಾನಗರದ ವಿವಿಧ ಸಮುದಾಯದ ೪೨ ಕ್ಕೂ ಹೆಚ್ಚು ತುಳು ಕನ್ನಡಿಗ ಗಣ್ಯ ವ್ಯಕ್ತಿಗಳು ಬಾಗವಹಿಸಿದ್ದರು.

ಇಲ್ಲಿನ ತುಳು ಕನ್ನಡಿಗರನ್ನು ತವರೂರಿಗೆ ಸೇರಿಸದ ಕರ್ನಾಟಕ ಸರಕಾರದ ನಿರ್ಧಾರದ ಬಗ್ಗೆ ಸಮಿತಿಯ ಎಲ್ಲಾ ಸದಸ್ಯರು ತಮ್ಮ ಅಭಿಪ್ರಾಯವನ್ನು ಮಂಡಿಸಿ, ಕರ್ನಾಟಕ ಸರ್ಕಾರದ ಹಾಲಿ ಧೋರಣೆಯಿಂದ ತೀವ್ರ ಕೊರೋನಾ ಬಾಧಿತ ಮುಂಬಯಿ ಕನ್ನಡಿಗರ‌ ಮೇಲಾಗಿರುವ ಪ್ರತಿಕೂಲ ಪರಿಣಾಮಗಳನ್ನು ಚರ್ಚಿಸಿದರು. ಸಮಿತಿಗೆ ಮುಂಬಯಿಯ ನೂರಾರು ತುಳು-ಕನ್ನಡಿಗರು ಸಹಾಯಕ್ಕಾಗಿ ‌ಮೊರೆ ಇಟ್ಟಿದ್ದು ಲಾಕ್ ಡೌನ್ ನಿಂದಾಗಿ ಉಂಟಾದ ತಮ್ಮ ದುಸ್ಥಿತಿಯ ಬಗ್ಗೆ ಸಮಿತಿಯ ಗಮನಕ್ಕೆ ತಂದಿದ್ದು ಕರ್ನಾಟಕ ಸರಕಾರವನ್ನು ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳಲು ವಿನಂತಿಸಿದ್ದಾರೆ.

ವಿಶೇಷವಾಗಿ ಕರ್ನಾಟ ಕರ್ನಾಟಕದ ಕರಾವಳಿ ಮೂಲದ ಹೊಟೇಲು ಚಾಲಕ- ಕಾರ್ಮಿಕ ಸಮುದಾಯ ಕರ್ನಾಟಕ ಸರಕಾರದ ಧೋರಣೆಯಿಂದ ಬಹಳ ತೊಂದರೆಗೀಡಾಗಿದ್ದು ಕರ್ನಾಟಕ ಸರಕಾರವು ಕೇಂದ್ರ ಸರಕಾರದೊಂದಿಗೆ ಸಮಾಲೋಚನೆ ನಡೆಸಿ ಕೂಡಲೇ ಮಹಾರಾಷ್ಟ್ರ ಕರ್ನಾಟಕ ಗಡಿಯನ್ನು ತೆರವು ಮಾಡುದರೊಂದಿಗೆ ಇಲ್ಲಿನ ತುಳು ಕನ್ನಡಿಗರನ್ನು ರೈಲು, ಬಸ್ಸು, ಕಾರು ಮತ್ತು ವಿಮಾನದ ಮೂಲಕ ಪ್ರಯಾಣಿಸುವಂತೆ ಮಾಡಿ ತುಳು ಕನ್ನಡಿಗರನ್ನು ತಾಯ್ನಾಡಿಗೆ ಸ್ವಾಗತಿಸಬೇಕೆಂದು ಕರ್ನಾಟಕದ ಮಾನ್ಯ ಮುಖ್ಯ ಮಂತ್ರಿ ಬಿ. ಎಸ್. ಯಡಿಯೂರಪ್ಪ ನವರಿಗೆ ಮುಂಬಯಿಯ ಸಂಸದರಾದ ಗೋಪಾಲ ಶೆಟ್ಟಿಯವರ ಮೂಲಕ ವಿನಂತಿಸಲಾಯಿತು.

jayakrishna [2]ಮಹಾನಗರದ ತುಳು ಕನ್ನಡಿಗರ ಇಂದಿನ ಸಮಸ್ಯೆಗೆ ಸ್ಪಂದಿಸಲು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಕರ್ನಾಟಕದ ಮುಖ್ಯ ಮಂತ್ರಿಯವರಿಗೆ ಬರೆದ ಪತ್ರದಲ್ಲಿ ಈ ಕೆಳಗಿನ ತುರ್ತು ಬೇಡಿಕೆಗಳನ್ನು ಮುಂದಿಡಲಾಯಿತು.

1. ಮುಂಬೈಯಿಂದ ಊರಿಗೆ (ಕರ್ನಾಟಕದ ಯಾವುದೇ ಭಾಗಕ್ಕೆ) ಬರುವವರಿಗೆ ಯಾವುದೇ ನಿರ್ಬಂಧ ಹೇರಬಾರದು.
2. ರಸ್ತೆ ಪ್ರಯಾಣಕ್ಕೆ ಖಾಸಗಿ ವಾಹನ ಕ್ಕೆ ಕೂಡಲೇ ಅನುಮತಿ ಸಿಗಬೇಕು.
3.ಕರ್ನಾಟಕದ ತಮ್ಮ ಊರಿಗೆ ಹೋದ ಮುಂಬೈಗರಿಗೆ ಗೌರವ ಪೂರ್ವಕ ವೈದ್ಯಕೀಯ ಸವಲತ್ತು ನೀಡಬೇಕು.
4. ಸೋಂಕು ಪೀಡಿತರಲ್ಲದವರಿಗೆ ಅವರವರ ಮನೆಯಲ್ಲೇ 7 ದಿನದ ಕ್ವಾರಂಟೈನ್ ವ್ಯವಸ್ಥೆ ಮಾಡಬೇಕು ವಿನಹ ಸರಕಾರಿ ವ್ಯವಸ್ಥೆಯ ಕ್ವಾರಂಟೈನ್‌ ಗೆ ಒತ್ತಾಯಿಸಬಾರದು.
5. ಇ ಪಾಸ್ ಗಳನ್ನು ತುರ್ತಾಗಿ ನೀಡಬೇಕು.

ಜೊತೆಗೆ, ಮಹಾರಾಷ್ಟ್ರ ಮುಖ್ಯ ಮಂತ್ರಿ ಹಾಗೂ ಕೇಂದ್ರ ರೈಲ್ವೆ ಮಂತ್ರಿಯವರಲ್ಲಿ ಕೂಡಲೇ ಹಿಂದಿನ ದಿನಗಳಲ್ಲಿನ ನಿಗದಿತ ರೈಲುಗಳನ್ನು ಕೂಡಲೇ ಪುನಾರಂಭಿಸಬೇಕೆಂದೂ ಮನವಿ ಮಾಡಲಾಯಿತು.

ಮೇಲಿನ ಎಲ್ಲ ಬೇಡಿಕೆ ಹಾಗೂ ಮನವಿಗಳ ಕುರಿತು ಕನ್ನಡಿಗರ ಹಿತಾಸಕ್ತಿ ಮತ್ತು ಕಾಳಜಿಯಿಂದ ಸಂಬಂಧಿಸಿದ ಮಂತ್ರಿಗಳು, ಮುಖ್ಯಮಂತ್ರಿ , ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆಗೆ ಸಮಾಲೋಚಿಸಿ ಶೀಘ್ರವಾಗಿ ಫಲಿತಾಂಶ ತರುವಂತೆ ಕರ್ನಾಟಕ ಮೂಲದ ಮುಂಬಯಿ ಸಂಸದ ಶ್ರೀ ಗೋಪಾಲ್ ಶೆಟ್ಟಿಯವರನ್ನು ಆಗ್ರಹಿಸುವಂತೆ ಅಧ್ಯಕ್ಷರಿಗೆ ಸಮಿತಿ ಏಕಾಭಿಪ್ರಾಯದ ನಿಲುವು ವ್ಯಕ್ತಪಡಿಸಿತು.

ಪ್ರಾರಂಭದಲ್ಲಿ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನದಾಸರು ವಿಶೇಷ ಸಭೆಯನ್ನು ಆಯೋಜಿಸಿದ ಉದ್ದೇಶವನ್ನು ಪ್ರಸ್ತುತ ಪಡಿಸಿದರು. ತೋನ್ಸೆ ಜಯಕೃಷ್ಣ ಎ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾರ್ಗದರ್ಶನ ನೀಡಿದರು.

ಈ ಸಭೆಯಲ್ಲಿ ಸಮಿತಿಯ ಗೌರವ ಕೋಶಾಧಿಕಾರಿ ಸುರೇಂದ್ರ ಸಾಲಿಯಾನ್, ಮಾಜಿ ಅಧ್ಯಕ್ಷರಾದ ಹರೀಶ್ ಕುಮಾರ್ ಶೆಟ್ಟಿ, ಜವಾಬ್ ನ ಅಧ್ಯಕ್ಷರಾದ ಸಿ ಎ ಐ ಆರ್ ಶೆಟ್ಟಿ, ಬಿಲ್ಲವರ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರುಗಳಾದ ಎಲ್ ವಿ ಅಮೀನ್ ಮತ್ತು ನಿತ್ಯಾನಂದ ಡಿ. ಕೋಟ್ಯಾನ್, ಹಿರಿಯ ಕಾರ್ಮಿಕ ನಾಯಕ ಫೆಲಿಕ್ಸ್ ಡಿ ಸೋಜಾ, ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಅರ್, ಬೆಳ್ಚಡ, ಮೊಗವೀರ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷರಾದ ಕೆ ಎಲ್ ಬಂಗೇರ, ವಿಶ್ವಕರ್ಮ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರಾದ ಜಿ ಟಿ ಆಚಾರ್ಯ, ಕರ್ನಾಟಕ ಸಂಘ ಅಂಧೇರಿ ಅಧ್ಯಕ್ಷರಾದ ಪಿ .ಡಿ. ಶೆಟ್ಟಿ, ಕರ್ನಾಟಕ ಸಂಘ ಅಂಧೇರಿಯ ಮಾಜಿ ಅಧ್ಯಕ್ಷರಾದ ಹ್ಯಾರಿ ಸಿಕ್ವೇರಾ, ಹಿರಿಯ ನ್ಯಾಯವಾದಿ ಅಡ್ವೋಕೇಟ್ ಪ್ರಕಾಶ್ ಶೆಟ್ಟಿ, ಅಡ್ವೋಕೇಟ್ ಮೋರ್ಲಾ ರತ್ನಾಕರ್ ಶೆಟ್ಟಿ, ಅಡ್ವೋಕೇಟ್ ಆರ್ ಜಿ ಶೆಟ್ಟಿ, ವಿಶ್ವಕರ್ಮ ಅಸೋಸಿಯೇಷನ್ ನ ಅಧ್ಯಕ್ಷರಾದ ಸದಾನಂದ ಆಚಾರ್ಯ, ದೇವಾಡಿಗ ಸಂಘ ಮುಂಬಯಿಯ ಅಧ್ಯಕ್ಷರಾದ ರವಿ ಎಸ್ ದೇವಾಡಿಗ, ದೇವಾಡಿಗ ಸಂಘ ಮುಂಬಯಿಯ ಉಪಾಧ್ಯಕ್ಷರಾದ ಪ್ರವೀಣ್ ನಾರಾಯಣ್, ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ದೇವದಾಸ್ ಕುಲಾಲ್, ಭಂಡಾರಿ ಸೇವಾ ಸಂಘ ಮುಂಬಯಿಯ ಅಧ್ಯಕ್ಷರಾದ ಅಡ್ವೋಕೇಟ್ ಆರ್ ಎಮ್ ಭಂಡಾರಿ, ಹಿರಿಯ ಪತ್ರಕರ್ತ,ಸಮಿತಿಯ ವಕ್ತಾರ ಕಳ್ಳಿಗೆ ದಯಾಸಾಗರ ಚೌಟ, ಸಮಿತಿಯ ಗೌರವ ಕಾರ್ಯದರ್ಶಿ , ಪ್ರೊಫೆಸರ್ ಶಂಕರ್ ಉಡುಪಿ, ಬಿಜೆಪಿ ಕಾರ್ಯಕರ್ತ ಸಚ್ಚಿದಾನಂದ ಶೆಟ್ಟಿ, ರವಿರಾಜ್ ಕಲ್ಯಾಣಪುರ್, ವಿದ್ಯಾದಾಯಿನಿ ಸಭಾದ ಗೌರವ ಪ್ರಧಾನ ಕಾರ್ಯದರ್ಶಿ ಚಿತ್ರಪು ಕೆ ಎಮ್ . ಕೋಟ್ಯಾನ್, ಬಿಲ್ಲವರ ಅಸೋಸಿಯೇಷನ್ ಸ್ಥಳೀಯ ಸಮಿತಿ ಅಧ್ಯಕ್ಷರಾದ ಎಮ್ ಎನ್ ಕರ್ಕೇರ, ಪದ್ಮಶಾಲಿ ಸೇವಾ ಸಂಘ ಮುಂಬಯಿಯ ಅಧ್ಯಕ್ಷರಾದ ಉತ್ತಮ ಶೆಟ್ಟಿಗಾರ್, ಸಂದೀಪ್ ಶೆಟ್ಟಿ, ದಕ್ಷಿಣ ಭಾರತ ಬಿಜೆಪಿ ಸೆಲ್ ಅಧ್ಯಕ್ಷರಾದ ಸುರೇಶ್ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.

ವರದಿ : ಈಶ್ವರ ಎಂ. ಐಲ್