[1]ಮಂಗಳೂರು :ಶಾಸಕ ಕೃಷ್ಣ ಜೆ ಪಾಲೆಮಾರ್ ರವರು ನಗರದ ಬೊಕ್ಕಪಟ್ಟಣದ ನಡುಕುದ್ರುವಿನಲ್ಲಿ ನೂತನ ಪ್ರವಾಸಿ ತಾಣ ‘ಕುಡ್ಲ ಕುದ್ರುವನ್ನು’ ವನ್ನು ರವಿವಾರ ಸಂಜೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕರಾವಳಿ ಜನತೆಯ ಆಧ್ಯತೆಯ ಮೇರೆಗೆ ಇಲ್ಲಿ ಪ್ರವಾಸಿ ತಾಣಗಳು ರೂಪುಗೊಳ್ಳುತ್ತಿರುವುದು ಒಂದು ಉತ್ತಮ ಬೆಳವಣಿಗೆಯಾಗಿದ್ದು ಈ ಪ್ರವಾಸಿ ತಾಣವು ಕರಾವಳಿ ಪ್ರವಾಸೋಧ್ಯಮಕ್ಕೆ ಹೊಸ ಮುನ್ನುಡಿ ಎಂದವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದಾನಸಭಾ ಉಪಸಭಾಪತಿ ಎನ್ ಯೋಗೀಶ್ ಭಟ್ ವಹಿಸಿದ್ದರು. ಮಂಗಳೂರು ಮೇಯರ್ ಗುಲ್ಜಾರ್ ಬಾನು, ಉಪ ಮೇಯರ್ ಅಮಿತಕಲಾ, ಸಹಾಯಕ ಪೊಲೀಸ್ ಆಯುಕ್ತ ಹರಿಶ್ಚಂದ್ರ, ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಲ್ಯಾಂಡ್ ಲಿಂಕ್ಸ್ ನ ಆಡಳಿತ ನಿರ್ದೇಶಕ ಪ್ರದೀಪ್ ಪಾಲೆಮಾರ್, ಕುಡ್ಲ ಕುದ್ರು ವಿನ ಪಾಲುದಾರ ಸೋನಿಯಾ ಸಿ ಕರ್ಕೇರ ಹಾಗೂ ಪ್ರವೀಣ್ ಬರ್ಕೆ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕರಾವಳಿಯ ಅತ್ಯುತ್ತಮ ಪ್ರವಾಸಿ ತಾಣವಾಗಿ ಬಂದರು ಇಲಾಖೆಗೆ ಸೇರಿದ ಈ ದ್ವೀಪವನ್ನು ಪಾಲುದಾರಿಕೆಯಲ್ಲಿ ಗುತ್ತಿಗೆ ಪಡೆದು, ’ಕುಡ್ಲ ಕುದ್ರು’ ಹೆಸರನ್ನಿಟ್ಟು ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಖಾಸಗಿ ಪಾಲುದಾರಿಕೆಯಲ್ಲಿ ಪಿಕ್ನಿಕ್ ತಾಣವಾಗಿ ಸಿದ್ದಗೊಳಿಸಲಾಗಿದೆ.
ಎಲ್ಲ ವರ್ಗದ ಜನರಿಗೆ ಮನೋರಂಜನೆ, ಸಭೆ ಸಮಾರಂಭಗಳಿಗೆ ಬಳಕೆ ಮಾಡಿಕೊಳ್ಳಲು ಇಲ್ಲಿ ಅವಕಾಶಗಳಿವೆ ಮತ್ತು ರಜಾದಿನಗಳು ಮತ್ತು ವಿಶೇಷ ಕಾರ್ಯಕ್ರಮ ನಡೆಸಲು ಬೇಕಾದ ಸಂಗೀತ ರಸಸಂಜೆ ಮತ್ತಿತರ ಸೌಲಭ್ಯವನ್ನು ಇಲ್ಲಿ ಮಾಡಿಕೊಡಲಾಗುತ್ತದೆ. ಇಲ್ಲಿ ನಿರ್ಮಿಸಿರುವ ರೆಸ್ಟೋರೆಂಟ್ನಲ್ಲಿ ಪ್ರತಿದಿನವೂ ಊಟೋಪಚಾರ, ತಾಜಾ ಮೀನಿನ ಖಾದ್ಯಗಳು, ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.
ಕುಡ್ಲ ಕುದ್ರು ತಲುಪಲು ಸುಲ್ತಾನ್ ಬತ್ತೇರಿಯಲ್ಲಿ ನಿರ್ಮಿಸಿದ ಜೆಟ್ಟಿ ಮೂಲಕ 175 ಪ್ರಯಾಣಿಕರ ಆಸನ ಸಾಮರ್ಥ್ಯ ಇರುವ ’ದೋಣಿ ಮನೆ’ ಪ್ರತಿದಿನ ಸಂಚರಿಸಲಿದೆ. ಇದರಲ್ಲಿ ದೋಣಿ ವಿಹಾರದ ಜತೆಗೆ, ಭೋಜನ, ಉಪಹಾರ ವ್ಯವಸ್ಥೆ ಇದೆ. ಅದರ ಮೂಲಕ ಮಕ್ಕಳಿಗೆ ಲೈಫ್ ಜಾಕೆಟ್ ಸಹಿತ ಸೊಂಟಕ್ಕೆ ಹಗ್ಗ ಕಟ್ಟಿ ಈಜಾಟ ವ್ಯವಸ್ಥೆ ಕಲ್ಪಿಸಲಾಗಿದೆ.
ವಿದ್ಯುತ್ ದೀಪಗಳ ಮನಮೋಹಕ ಅಲಂಕಾರದಿಂದ ವಿಭಿನ್ನ ಗೆಟಪ್ನಲ್ಲಿ ಕುಡ್ಲ ಕುದ್ರು ನಿರ್ಮಾಣಗೊಂಡಿದ್ದು ನೈಸರ್ಗಿಕ ಈಜುಕೊಳ, ಮರದ ಜೋಕಾಲಿ, ಬಿದಿರಿನ ಮನೆಗಳು, ಮರದ ಮೇಲಿನ ಮನೆಗಳು, ತಿರುಗುವ ತೊಟ್ಟಿಲು ಮುಂತಾದ ಹಲವು ವ್ಯವಸ್ಥೆಗಳನ್ನು ಈ ಪ್ರವಾಸಿ ತಾಣವು ಒಳಗೊಂಡಿದೆ.