[1]ಬೆಂಗಳೂರು: ಸರ್ಜಾ ಕುಟುಂಬದ ಕುಡಿ ಕನ್ನಡದ ನಾಯಕ ನಟ ಚಿರಂಜೀವಿ ಸರ್ಜಾ ಅವರು ಉಸಿರಾಟದ ತೊಂದರೆಯಿಂದ ನಗರದ ಸಾಗರ್ ಅಪೋಲೊ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಭಾನುವಾರ ಹೃದಯಾಘಾತ ದಿಂದ ಕೊನೆಯುಸಿರೆಳಿದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಚಿರಂಜೀವಿ ಸರ್ಜಾಗೆ ನಿನ್ನೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು . ಇಂದು ಮಧ್ಯಾಹ್ನ 3:00 ಗಂಟೆಗೆ ಅಪಾಯಿಂಟ್ಮೆಂಟ್ ಇತ್ತು. ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಮನೆಯಲ್ಲಿ ಚಿರಂಜೀವಿ ಕುಸಿದು ಬಿದ್ದಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ನಟ ಚಿರಂಜೀವಿ ಕೊನೆಯುಸಿರೆಳೆದಿದ್ದಾರೆ.
ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ನಿಯಮಗಳಂತೆ ಅವರ ಸ್ವಾಬ್ ಕಲೆಕ್ಟ್ ಮಾಡಿ ಲ್ಯಾಬ್ ಗೆ ಕಳಿಸಲಾಗಿದೆ.
39 ವರ್ಷದ ಚಿರಂಜೀವಿ ಸರ್ಜಾ ಕನ್ನಡ ಚಿತ್ರರಂಗದಲ್ಲಿ 22 ಚಿತ್ರಗಳಲ್ಲಿ ನಟಿಸಿದ್ದರು. 1980ರ ಅಕ್ಟೋಬರ್ 17ರಂದು ಜನಿಸಿದ್ದ ಚಿರಂಜೀವಿ ಸರ್ಜಾ 2009ರಲ್ಲಿ ವಾಯುಪುತ್ರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಅದಕ್ಕೂ ಮೊದಲು ಸುಮಾರು ನಾಲ್ಕು ವರ್ಷಗಳ ಕಾಲ ಅರ್ಜುನ್ ಸರ್ಜಾ ಅವರೊಂದಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು.
ಕನ್ನಡ ಖ್ಯಾತ ಖಳನಟರಾಗಿದ್ದ ಶಕ್ತಿಪ್ರಸಾದ್ ಅವರ ಮೊಮ್ಮಗರಾಗಿದ್ದ, ಚಿರಂಜೀವಿ, ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಅವರ ಸೋದರಳಿರಾಗಿದ್ದರು. ಕನ್ನಡದ ನಾಯಕ ನಟ ಧ್ರುವ ಸರ್ಜಾರ ಸಹೋದರ.
2017 ರ ಅಕ್ಟೋಬರ್ ನಲ್ಲಿ ನಟಿ ಮೇಘನಾ ರಾಜ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಚಿರಂಜೀವಿ ಸರ್ಜಾ 2018ರ ಮೇ ಎರಡನೇ ತಾರೀಕಿನಂದು ವಿವಾಹವಾಗಿದ್ದರು.
ಮೊದಲ ಚಿತ್ರ ವಾಯುಪುತ್ರದ ನಟನೆಗಾಗಿ ಅತ್ಯುತ್ತಮ ಯುವ ನಾಯಕ ನಟ ಎಂಬ ಪ್ರಶಸ್ತಿ ಪಡೆದಿದ್ದರು. 2010ರಲ್ಲಿ ನಟಿಸಿದ್ದ ಚಿರು ಚಿತ್ರ ಭಾರಿ ಯಶಸ್ಸು ಗಳಿಸಿತ್ತು. ನಂತರ ಗಂಡೆದೆ, ದಂಡಂ ದಶಗುಣಂ, ವರದನಾಯಕ, ವಿಶಲ್, ಚಂದ್ರಲೇಖ, ಅಜಿತ್, ರುದ್ರತಾಂಡವ, ಆಟಗಾರ, ರಾಮಲೀಲಾ, ಆಕೆ, ಸಂಹಾರ, ಸೀಜರ್ ಮುಂತಾದ ಸಾಲು ಸಾಲು ಚಿತ್ರಗಳಲ್ಲಿ ಸರ್ಜಾ ನಟಿಸಿದ್ದರು.
2019ರಲ್ಲಿ ಚಿರಂಜಿವಿ ಸರ್ಜಾರ ನಾಲ್ಕು ಚಿತ್ರಗಳು ತೆರೆಕಂಡಿದ್ದವು. ಸಿಂಗ, ಖಾಕಿ, ಆದ್ಯ, ಶಿವಾರ್ಜುನ ಚಿತ್ರಗಳು ತೆರೆಕಂಡಿದ್ದವು. ಚಿರಂಜೀವಿ ಸರ್ಜಾ ನಟಿಸಿದ್ದ ರಾಜಮಾರ್ತಾಂಡ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಎಪ್ರಿಲ್, ರಣಂ, ಕ್ಷತ್ರೀಯ ಚಿತ್ರಗಳು ಇನ್ನೂ ನಿರ್ಮಾಣ ಹಂತದಲ್ಲಿದೆ.